ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ಭಾನುವಾರ ನದಿಗೆ ನೀರು ಹರಿಸಲಾಯಿತು.
ಒಟ್ಟು ಮೂರು ಕ್ರಸ್ಟ್ಗೇಟ್ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ. ಒಂದೊಂದು ಗೇಟು ತಲಾ ಒಂದು ಅಡಿ ವರೆಗೆ ಮೇಲಕ್ಕೆ ತೆಗೆದು 4,611 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
133 ಟಿ.ಎಂ.ಸಿ. ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 100.855 ಟಿ.ಎಂ.ಸಿ. ಅಡಿ ನೀರು ಸಂಗ್ರಹಗೊಂಡಿದ್ದು, 32 ಟಿ.ಎಂ.ಸಿ. ಅಡಿಗೂ ಅಧಿಕ ಹೂಳು ತುಂಬಿಕೊಂಡಿದೆ.
ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಒಳಹರಿವು ಇರುವ ಕಾರಣ ನದಿಗೆ ನೀರು ಬಿಡಲಾಗುತ್ತಿದೆ. ಭಾನುವಾರ 12,301 ಕ್ಯುಸೆಕ್ ಒಳಹರಿವು, 12,376 ಕ್ಯುಸೆಕ್ ಹೊರಹರಿವು ದಾಖಲಾಗಿದೆ. 7,765 ಕ್ಯುಸೆಕ್ ನೀರು ಎಲ್ಲಾ ಕಾಲುವೆಗಳಿಗೆ ಹರಿಸಲಾಗುತ್ತಿದೆ.
‘ಒಳಹರಿವು ನೋಡಿಕೊಂಡು ನದಿಗೆ ನೀರು ಹರಿಸಲಾಗುವುದು. ದಸರಾ ರಜೆ ಹಿನ್ನೆಲೆಯಲ್ಲಿ ವಿವಿಧ ಕಡೆಗಳಿಂದ ಅನೇಕ ಅಣೆಕಟ್ಟೆ ನೋಡಲು ಜನ ಬರುತ್ತಾರೆ. ಆಯುಧ ಪೂಜೆ, ವಿಜಯದಶಮಿ ದಿನ ಎಲ್ಲಾ ಕ್ರಸ್ಟ್ಗೇಟ್ಗಳನ್ನು ತೆರೆದು ನದಿಗೆ ನೀರು ಹರಿಸಲು ಚಿಂತನೆ ನಡೆದಿದ್ದು, ಇನ್ನಷ್ಟೇ ತೀರ್ಮಾನವಾಗಬೇಕಿದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.