ಹೊಸಪೇಟೆ: ಆರ್ಯವೈಶ್ಯ ಸಮಾಜದ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ತಾಲ್ಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ಮಹಾಮಂಡಳಿಯ ಪದಾಧಿಕಾರಿಗಳು ಸೋಮವಾರ ಇಲ್ಲಿ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ಆರ್ಯವೈಶ್ಯ ಅಭಿವೃದ್ಧಿ ನಿಗಮ ರಚಿಸಿ, ₹10 ಕೋಟಿ ಅನುದಾನ ನೀಡಿದೆ. ಅದಕ್ಕೆ ಸಮಾಜದ ಮುಖಂಡ ಟಿ.ಎ. ಶರವಣ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದೆ. ಆದರೆ, ಸಮಾಜದ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಇದರಿಂದ ಅವರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಪ್ರಮಾಣ ಪತ್ರ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಾತಿ ಪ್ರಮಾಣ ಪತ್ರ ಸಿಕ್ಕರೆ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗಕ್ಕೆ ಅನುಕೂಲವಾಗುತ್ತದೆ. ಇದರಲ್ಲಿ ಮಕ್ಕಳ ಭವಿಷ್ಯ ಅಡಗಿರುವ ಕಾರಣ ಆದಷ್ಟು ಶೀಘ್ರದಲ್ಲಿ ಪ್ರಮಾಣ ಪತ್ರ ಕೊಡಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಮಹಾಮಂಡಳಿ ಅಧ್ಯಕ್ಷ ಜಿ. ಸಂಜೀವ್ ಶೆಟ್ಟಿ, ಕಾರ್ಯದರ್ಶಿ ಎಚ್.ಎಸ್. ಪ್ರಕಾಶ್, ಕೋಶಾಧಿಕಾರಿ ಎಂ. ಆನಂದ ಕೃಷ್ಣ, ಉಪಾಧ್ಯಕ್ಷರಾದ ಜೆ.ಎಸ್. ಮನೋಹರ್ ಗುಪ್ತಾ, ಟಿ.ಆರ್. ಪ್ರವೀಣ್ ಕುಮಾರ್, ಸಹ ಕಾರ್ಯದರ್ಶಿ ರಾಜೇಶ್ ತಲ್ಲಂ, ಮುಖಂಡ ನರಸಿಂಹಮೂರ್ತಿ ಇದ್ದರು.