ಹೊಸಪೇಟೆ: ಮದ್ಯದ ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಸಾಯಿ ನಾಗೇನಹಳ್ಳಿ ಯುವಕರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ನಂತರ ಅಬಕಾರಿ ಇನ್ಸ್ಪೆಕ್ಟರ್ಗೆ ಮನವಿ ಪತ್ರ ಸಲ್ಲಿಸಿದರು.
ಮದ್ಯದ ಅಂಗಡಿಯಿಂದ 20 ಅಡಿ ದೂರದಲ್ಲಿ ಪುರಾತನ ಬಸವಣ್ಣ ದೇವಾಲಯ, 300 ಅಡಿ ದೂರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನ ಸೇರಿದಂತೆ ಇತರೆ ಪ್ರದೇಶಗಳಿಗೆ ಜನ ಇದೇ ಭಾಗದಿಂದ ಓಡಾಡುತ್ತಾರೆ. ಶಾಲೆಗೆ ಹೋಗುವ ಮಕ್ಕಳು, ದೇವಸ್ಥಾನಕ್ಕೆ ಹೋಗಿ ಬರುವ ಮಹಿಳೆಯರು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಜನ ಎದುರಿಸುತ್ತಿರುವ ಸಮಸ್ಯೆ ಮನಗಂಡು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಅವಿನಾಶ, ನೂರ್, ಹಿಮಗಿರಿ, ಖಲೀಲ್, ಕೆ.ಎನ್. ರಾಜ, ಜಗದೀಶ್, ಮಂಜುನಾಥ ಇದ್ದರು.