ಹೊಸಪೇಟೆ: ‘ವಿಜಯನಗರ ಕ್ಷೇತ್ರದಲ್ಲಿ ಚುನಾವಣೆ ಎದುರಿಸುವುದು ಬಹಳ ಕಷ್ಟ. ಇಲ್ಲಿ ಚುನಾವಣೆಗೆ ಸ್ಪರ್ಧಿಸುವವರು ಬೇಕಾಬಿಟ್ಟಿ ಹಣವನ್ನು ಮತದಾರರಿಗೆ ಹಂಚುತ್ತಾರೆ. ಆ ಸಾಮರ್ಥ್ಯ ನನಗಿಲ್ಲ’ ಎಂದು ಮಾಜಿಶಾಸಕ ಎಂ.ಎನ್. ನಬಿ ಹೇಳಿದರು.
ಶುಕ್ರವಾರ ನಗರದಲ್ಲಿ ನಡೆದ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಅರಮನೆಯಲ್ಲಿ ವಾಸಿಸುವವನಲ್ಲ. ಜನಸಾಮಾನ್ಯರಂತೆ ಬದುಕುವವನು. ಈ ಕ್ಷೇತ್ರದ ಹಣವಂತರನ್ನು ನೋಡಿದರೆ ಹೆದರಿಕೆಯಾಗುತ್ತದೆ’ ಎಂದು ತಿಳಿಸಿದರು.
‘ಹಣವಂತರ ಮಧ್ಯೆಯೂ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಜನ ಖಂಡಿತವಾಗಿಯೂ ನನ್ನನ್ನು ಜನ ಸೇವೆ ಮಾಡಲು ಅವಕಾಶ ಕಲ್ಪಿಸುತ್ತಾರೆ ಎಂಬ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಎನ್.ಟಿ. ಬೊಮ್ಮಣ್ಣ, ಮುಖಂಡರಾದ ಕೊಟ್ರೇಶ್, ಖಾಜಾ ನಿಯಾಜಿ ಇದ್ದರು.