ಹೊಸಪೇಟೆ: ‘ಸಣ್ಣ ಸಣ್ಣ ಕೆಲಸಗಳೇ ದೊಡ್ಡ ಗುರಿ ತಲುಪಲು ಸಾಧ್ಯವಾಗುತ್ತದೆ. ಹಾಗಾಗಿ ಸಣ್ಣದು, ದೊಡ್ಡದು ಎಂದು ಭೇದ ಮಾಡದೇ ಎಲ್ಲ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಯಶಸ್ಸು ಸಿಗುತ್ತದೆ’ ಎಂದು ‘ಕ್ವಾಲಕಮ್’ ಎಂಜಿನಿಯರಿಂಗ್ ವ್ಯವಸ್ಥಾಪಕ ವೆಂಕಟ ರಾಘವನ್ ತಿಳಿಸಿದರು.
ನಗರದ ಟಿ.ಎಂ.ಎ.ಇ. ಪಾಲಿಟೆಕ್ನಿಕ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂಜಿನಿಯರ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಮೂಲಭೂತ ಸಿದ್ಧಾಂತ, ಗಣಿತ ವಿಷಯಗಳಲ್ಲಿ ಪರಿಣತಿ ಹೊಂದಿ, ನಿರಂತರವಾಗಿ ಅಭ್ಯಾಸ ಮತ್ತು ಸಾಧನೆ ಮಾಡಬೇಕು. ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಹೊರಗಿನವರು ಸೂಕ್ಷ್ಮವಾಗಿ ಗಮನಿಸಿರುತ್ತಾರೆ. ಹಾಗಾಗಿ ಪ್ರತಿಯೊಂದನ್ನೂ ಗಂಭೀರವಾಗಿ ಅಧ್ಯಯನ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
‘ಬದಲಾವಣೆ ಜಗದ ನಿಯಮ. ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು. ನಮ್ಮ ಕೆಲಸದ ವಿಧಾನ ಬದಲಾಗಬೇಕು. ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು. ಆತ್ಮವಿಶ್ವಾಸ, ಛಲದಿಂದ ಮುಂದುವರೆಯಬೇಕು’ ಎಂದು ಎಸ್.ಎಲ್.ಆರ್. ಮೆಟಾಲಿಕ್ಸ್ನ ಆಡಳಿತಾಧಿಕಾರಿ ಅಜಿತ್ ಎಂ. ಕುಲಕರ್ಣಿ ತಿಳಿಸಿದರು.
ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸುರೇಶ್ ಭೂರಟ್, ಮಂಜುನಾಥ್, ಪ್ರಾಚಾರ್ಯ ಟಿ.ಎಂ. ವಿಜಯಕುಮಾರ್, ಪ್ರಾಧ್ಯಾಪಕರಾದ ಹನುಮನಾಳ್, ಶಂಕರಾನಂದ, ಮಹೇಶ್ ಕುಮಾರ್, ನಜಿರುದ್ದೀನ್, ಯೋಗಾನಂದ, ಸಿಬ್ಬಂದಿ ವರ್ಗ ಇದ್ದರು.