ಹೊಸಪೇಟೆ: ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಗಂಗಾಮತಸ್ಥರಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಗಂಗಾಮತ ಸಮಾಜದವರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಂಗಾಮತ ಭವನದಿಂದ ಪ್ರಮುಖ ಬೀದಿಗಳ ಮೂಲಕ ತಾಲ್ಲೂಕು ಕಚೇರಿ ವರೆಗೆ ರ್ಯಾಲಿ ನಡೆಸಿದರು.ನಂತರ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಸಾಮಾಜಿಕ ನ್ಯಾಯ, ರೈತ ಪರ ಹೋರಾಟಗಾರರಾಗಿರುವ ಬಿ.ಎಸ್. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಸಂತಸದ ಸಂಗತಿಯಾಗಿದೆ. ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಗಂಗಾಮತಸ್ಥರಿದ್ದಾರೆ. ರಾಜಕೀಯವಾಗಿ ಹಿಂದುಳಿದಿರುವ ಈ ಜಾತಿಯವರು ಸಮಾಜದ ಮುಖ್ಯವಾಹಿನಿಗೆ ಬರುವುದು ಬಹಳ ಅತ್ಯಗತ್ಯ. ಸಂಪುಟದಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ ಸಿಕ್ಕರೆ ಅದು ಸಾಧ್ಯವಾಗುತ್ತದೆ’ ಎಂದು ಸಮಾಜದ ಮುಖಂಡ ವೈ. ಯಮುನೇಶ್ ಹೇಳಿದರು.
‘ಸಮಾಜಕ್ಕೆ ಸೇರಿದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಶಾಸಕ ಲಾಲಜಿ ಮೆಂಡನ್ ಅವರ ಪೈಕಿ ಒಬ್ಬರಿಗೆ ಸಚಿವರಾಗಿ ಮಾಡಬೇಕು. ಇದರಿಂದಾಗಿ ತುಳಿತಕ್ಕೆ ಒಳಗಾಗಿರುವ ಸಮಾಜದ ಅಭಿವೃದ್ಧಿ ಅನುಕೂಲವಾಗುತ್ತದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸಮಾಜದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ಮಾಡಿದ್ದಾರೆ. ಸಾಧ್ವಿ ನಿರಂಜನ ಅವರನ್ನು ಕೇಂದ್ರ ಸಚಿವರಾಗಿ ಮಾಡಿದ್ದಾರೆ. ಇದು ತಳಸಮುದಾಯಗಳ ಬಗೆಗಿನ ಮೋದಿಯವರ ಕಾಳಜಿ ತೋರಿಸುತ್ತದೆ. ಈ ಪರಂಪರೆಯನ್ನು ಯಡಿಯೂರಪ್ಪನವರು ಮುಂದುವರೆಸಬೇಕು’ ಎಂದು ಮನವಿ ಮಾಡಿದರು.
ಸಮಾಜದ ತಾಲ್ಲೂಕು ಅಧ್ಯಕ್ಷ ರಾಮಲಿ ಹುಲುಗಪ್ಪ, ಮುಖಂಡರಾದ ಎಸ್. ಗಾಳೆಪ್ಪ, ಅಭಿಮನ್ಯು, ಮೇಘನಾಥ, ಬಿ. ನಾಗರಾಜ, ಎಸ್. ನಾಗರಾಜ, ಸುಣಗಾರ ವೆಂಕಟಪ್ಪ, ಮಡ್ಡಿ ವೆಂಕಪ್ಪ, ಸುಭಾಷಚಂದ್ರ, ಕೃಷ್ಣ ರಾಜೇಂದ್ರ, ಮಡ್ಡಿ ಹನುಮಂತಪ್ಪ, ಎಂ. ಸಣ್ಣಕ್ಕೆಪ್ಪ, ಪಿ. ಷಣ್ಮುಖ ಇದ್ದರು.