ಹೊಸಪೇಟೆ: ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಜಾತಿಗಳನ್ನು ಕೈಬಿಡುವಂತೆ ಆಗ್ರಹಿಸಿ ಅಸ್ಪೃಶ್ಯ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ನಗರದ ಅಂಚೆ ಕಚೇರಿ ಎದುರು ಪತ್ರ ಚಳವಳಿ ನಡೆಸಿದರು.
ಬಳಿಕ ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಎರಡು ಸಾವಿರ ಮನವಿ ಪತ್ರಗಳನ್ನು ಅಂಚೆ ಪೆಟ್ಟಿಗೆಯೊಳಗೆ ಹಾಕಿ, ಘೋಷಣೆಗಳನ್ನು ಕೂಗಿದರು.
ಸ್ಪೃಶ್ಯ ಜಾತಿಗಳಾದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸಿ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಮುಖಂಡರಾದ ಎಂ.ಸಿ. ವೀರಸ್ವಾಮಿ, ನಿಂಬಗಲ್ ರಾಮಕೃಷ್ಣ, ಬಣ್ಣದಮನೆ ಸೋಮಶೇಖರ್, ಗ್ಯಾನಪ್ಪ ಬಡಿಗೇರ್, ಶಿವಕುಮಾರ ಗಂಗಪ್ಪ, ಕೊಟಗಿನಹಾಳು ಮಲ್ಲಿಕಾರ್ಜುನ, ಬಿ. ಮಾರೆಣ್ಣ, ಶೇಷು, ಭರತ್ ಕುಮಾರ್, ಶೇಕ್ಷಾವಲಿ, ನಾಗರಾಜ ಇದ್ದರು.