ಹೊಸಪೇಟೆ: ‘ದೇಶದಲ್ಲಿ ಶ್ರಮ ಸಂಸ್ಕೃತಿ ವಿನಾಶ ಹೊಂದುತ್ತಿರುವ ಕಾರಣ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ’ ಎಂದು ಗಾಂಧಿವಾದಿ, ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಹೇಳಿದರು.
ಭಾನುವಾರ ನಗರದ ಭಾವೈಕ್ಯತಾ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ಏಕೆ?’ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಶ್ರಮ ಸಂಸ್ಕೃತಿ ಪ್ರಧಾನವಾದ ಪವಿತ್ರ ಆರ್ಥಿಕತೆ ಬಹಳ ಮುಖ್ಯವಾದುದು. ಆದರೆ, ನಮ್ಮನ್ನಾಳುವ ಸರ್ಕಾರ ಅದರತ್ತ ಗಮನ ಹರಿಸುತ್ತಿಲ್ಲ. ಹೀಗಾಗಿಯೇ ಶ್ರಮ ಸಂಸ್ಕೃತಿ ನಿರ್ಲಕ್ಷ್ಯಕ್ಕೆ ಒಳಗಾಗಿ ಯಂತ್ರ ಸಂಸ್ಕೃತಿ ಬೆಳೆಯುತ್ತಿದೆ’ ಎಂದು ವಿಷಾದಿಸಿದರು.
‘ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಆರ್ಥಿಕ ನೀತಿಗಳು ವಿಫಲವಾಗುತ್ತಿವೆ. ಇದರಿಂದ ಆರ್ಥಿಕ ಮಟ್ಟ ಕುಸಿದಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆರ್ಥಿಕ ನೀತಿಗಳನ್ನು ಆರ್ಥಿಕ ತಜ್ಞರು ಟೀಕಿಸುತ್ತಿದ್ದಾರೆ. ಆದರೂ ಸರ್ಕಾರ ಅದನ್ನು ಸರಿಪಡಿಸಲು ಮುಂದಾಗುತ್ತಿಲ್ಲ’ ಎಂದರು. ಕಲಾವಿದ ಇನ್ಸಾಫ್ ಅವರು ಕುವೆಂಪು ರಚಿತ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಕೆಲವು ಆಯ್ದ ಭಾಗಗಳ ಮೇಲೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯ ಸಂಚಾಲಕ ಪಿ. ಅಬ್ದುಲ್ಲಾ, ರಂಗಭೂಮಿ ಕಲಾವಿದೆ ಕೆ. ನಾಗರತ್ನಮ್ಮ, ಉದ್ಯಮಿ ದಾದಾ ಕಲಂದರ್, ಪ್ರಾಧ್ಯಾಪಕರಾದ ಪ್ರೊ. ಚಲುವರಾಜು, ಎಸ್. ಶಿವಾನಂದ, ಎನ್. ಮುನಿರಾಜು, ಹೊನ್ನೂರಪ್ಪ ಇದ್ದರು.