ಹೊಸಪೇಟೆ (ವಿಜಯನಗರ): ಕೋವಿಡ್ ಇರುವುದರಿಂದ ಕ್ಷಯರೋಗಿಗಳ ಮನೆಗೆ ಹೋಗಿ ಆಪ್ತ ಸಮಾಲೋಚನೆ ನಡೆಸುವುದರ ಬದಲು ಅವರೊಂದಿಗೆ ದೂರವಾಣಿ ಮೂಲಕ ನಿತ್ಯ ಸಮಾಲೋಚನೆ ನಡೆಸಲಾಗುತ್ತಿದೆ.
ಸ್ಥಳೀಯ ಟಿ.ಬಿ. ಘಟಕದ ವತಿಯಿಂದ ಬುಧವಾರ ಕ್ಷಯರೋಗಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಯಾವುದೇ ಹಂತದಲ್ಲಿ ಚಿಕಿತ್ಸೆ ನಿಲ್ಲಿಸಬಾರದು. ಪ್ರಾಥಮಿಕ ಹಂತದ ಚಿಕಿತ್ಸೆ ಮುಗಿದ ನಂತರ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎರಡು ತಿಂಗಳಿಗೆ ಆಗುವಷ್ಟು ಔಷಧ ಮುಂಚಿತವಾಗಿ ಪಡೆಯುವುದು, ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಕ್ಷಯ ರೋಗಿಗಳು ಯಾವುದೇ ಕಾರಣಕ್ಕೂ ಹೊರಬರಬಾರದು. ಸದಾ ಮಾಸ್ಕ್ ಧರಿಸಿಕೊಂಡು, ಅಂತರ ಕಾಪಾಡಿಕೊಂಡು ಇರಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಕ್ಷಯ ರೋಗ ಮೇಲ್ವಿಚಾರಕ ಕಾಸಿಂ ಸಾಬ್, ಮೇಲ್ವಿಚಾರಕ ಚಂದ್ರಪ್ಪ, ಟಿ.ಬಿ.ಎಚ್.ವಿ. ಗವಿಸಿದ್ದಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿ ಟಿ. ಭಾಸ್ಕರ್, ಆರೋಗ್ಯ ಅಧಿಕಾರಿ ಧರ್ಮನಗೌಡ ಇದ್ದರು.