ಹೊಸಪೇಟೆ: ಜಾಗೃತ ಕೋಚಿಂಗ್ ಸೆಂಟರ್ನಿಂದ ಭಾನುವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪರಿಸರ ಪ್ರೇಮಿ ನಾಗಭೂಷಣ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಪ್ರತಿಯೊಬ್ಬರೂ ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಾಗಿದ್ದರೆ ನಮ್ಮ ಬಾಳು ಚೆಂದವಾಗಿ ಇರಲು ಸಾಧ್ಯ’ ಎಂದು ತಿಳಿಸಿದರು.
ಸೆಂಟರ್ನ ಸ್ಥಾಪಕಹಲಗಪ್ಪನವರ ವೀರೇಶ, ‘ಮಾನವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಷ್ಟೇ ಬೆಳೆದಿದ್ದರೂ ಪ್ರಕೃತಿ ವಿಕೋಪದ ರುದ್ರ ನರ್ತನದ ಮುಂದೆ ಅಸಹಾಯಕವಾಗಿ ಬಿಡುತ್ತಾನೆ. ಹಾಗಾಗಿ ಪರಿಸರಕ್ಕೆ ವಿರುದ್ಧವಾದ ಕೆಲಸಗಳಿಂದ ಹಿಂದೆ ಸರಿಯುವುದೇ ಉತ್ತಮ ಮಾರ್ಗ’ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಕೆ.ಕಿರಣ್ ಕುಮಾರ್,ಪವನ್ ಕಲಾಶಂಕರ್, ಕೋಣದ ವೀರೇಶ್, ಎಂ. ರವಿಚಂದ್ರ,ರಾಜಹುಸೇನ್,ಮಹೇಶ್, ದೇವಿ ಪ್ರಸಾದ್, ಸತೀಶ್ ಇದ್ದರು. ಇದೇ ವೇಳೆ ಮಕ್ಕಳಿಗೆ ಸಸಿ ವಿತರಿಸಲಾಯಿತು.