ಹೊಸಪೇಟೆ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಇಲ್ಲಿನ 29 ಮತ್ತು 31ನೇ ವಾರ್ಡಿನ ಜನ ಶುಕ್ರವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎರಡೂ ವಾರ್ಡ್ಗಳಿಗೆ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಸ್ಥಳೀಯರು ದುಡ್ಡು ಕೊಟ್ಟು ಹೊರಗಿನಿಂದ ನೀರು ತರಿಸಿಕೊಳ್ಳುತ್ತಿದ್ದಾರೆ. ಅನೇಕ ತಿಂಗಳಿಂದ ಇದು ಹೀಗೆಯೇ ಮುಂದುವರೆದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದಷ್ಟು ಶೀಘ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸ್ಥಳೀಯರಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಯಶ್ರೀ, ಸ್ವರ್ಣ, ಪಿ.ಬಿ. ವಿಜಯಕುಮಾರ, ಜಿ. ದೀಪಾ, ಮಲ್ಲೇಶ್ವರಿ, ಕವಿತಾ, ಹೊನ್ನೂರಮ್ಮ, ಹಯಾದ್ ಬಾಷಾ, ನಾಗರಾಜ ಮೊದಲಾದವರು ಇದ್ದರು.