ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಹಲವೆಡೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು.
ಬೆಳಿಗ್ಗೆಯಿಂದ ವಿಪರೀತ ಬಿಸಿಲು, ಸೆಕೆ ಇತ್ತು. ಸಂಜೆ ಏಕಾಏಕಿ ಕಾರ್ಮೋಡ ಕವಿದು, ಕೆಲಕಾಲ ಮಳೆಯಾಗಿದ್ದರಿಂದ ವಾತಾವರಣ ತಂಪಾಯಿತು.
ಕೋವಿಡ್ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಬಿಟ್ಟರೆ ಯಾರೊಬ್ಬರೂ ರಸ್ತೆಗಳಲ್ಲಿ ಇರಲಿಲ್ಲ. ಸಂಜೆ ಸುರಿದ ಮಳೆಗೆ ಅವರು ಕೂಡ ಕಟ್ಟಡಗಳ ಅಡಿ ಆಶ್ರಯ ಪಡೆದುಕೊಂಡಿದ್ದರಿಂದ ಪ್ರಮುಖ ರಸ್ತೆಗಳೆಲ್ಲ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.
ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಧರ್ಮದಗುಡ್ಡ, ಕಾಳಘಟ್ಟ, ಬಸವನದುರ್ಗ, ನಾಗೇನಹಳ್ಳಿ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.