ಬಳ್ಳಾರಿ: ನಗರದ ದೇವಿನಗರ 3ನೇ ಕ್ರಾಸ್ ನಲ್ಲಿಮನೆ ಮುಂದಿನ ರಸ್ತೆ ಬದಿಯಲ್ಲಿ ಕುಳಿತಿದ್ದ ಯಲ್ಲಪ್ಪ ಎಂಬುವವರನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮನೆ ಮುಂದಿನ ರಸ್ತೆ ಬದಿಯಲ್ಲಿ ಚೇರ್ ಮೇಲೆ ಕುಳಿತಿದ್ದ ಅವರ ಮೇಲೆ ದುಷ್ಕರ್ಮಿಗಳು ಹಳೆ ದ್ವೇಷದ ಹಿನ್ನೆಲೆ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಯಲ್ಲಪ್ಪ ಬಂದು ಕುಳಿತ ಹದಿನೈದು ನಿಮಿಷದಲ್ಲೇ ದಾಳಿ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಆಟೊದಲ್ಲಿ ಬಂದ ನಾಲ್ವರು ಮಚ್ಚು, ಲಾಂಗುಗಳ ಸಮೇತ ಬಂದು ಹಲ್ಲೆಗೆ ಮುಂದಾದಾಗ ಸಮೀಪದಲ್ಲಿದ್ದ ಕೋಳಿ ವ್ಯಾಪಾರಿ ತಡೆಯಲು ಮುಂದಾಗಿದ್ದರು. ತಮ್ಮ ಮೇಲೂ ಹಲ್ಲೆಗೆ ಯತ್ನಿಸಿದಾಗ ಅವರು ಓಡಿ ತಪ್ಪಿಸಿಕೊಂಡರು.
ಯಲ್ಲಪ್ಪ ರೌಡಿ ಪಟ್ಟಿಯಲ್ಲಿದ್ದರು ಎನ್ನಲಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಕೊಲೆಯಾಗಿದ್ದ ಬಂಡಿ ರಮೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು.
ಯಲ್ಲಪ್ಪನ್ನು ಪ್ರತಿಕಾರದಿಂದ ಕೊಲೆ ಮಾಡಲಾಗಿದೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ನಗರ ಡಿವೈಎಸ್ಪಿ ರಾಮರಾವ್, ಕೌಲ್ ಬಜಾರ್ ಠಾಣೆಯ ಸಿಪಿಐ ಹಾಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂಡಿ ರಮೇಶ್ ಸಚಿವ ಶ್ರೀರಾಮಲು ಆಪ್ತ. ಕಳೆದ ಎರಡು ವರ್ಷದ ಹಿಂದೆ ರಮೇಶ್ ಕೊಲೆಯಾಗಿತ್ತು.