ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯಿಂದ ಹಂಪಿ ಕಾಡು ನಾಶಕ್ಕೆ ತಡೆ

ಹೊಸಪೇಟೆ: ತಾಲ್ಲೂಕಿನ ಹಂಪಿಯ ಮಾತಂಗ ಪರ್ವತದಲ್ಲಿ ವಿದ್ಯುದ್ದೀಪಗಳ ಅಳವಡಿಕೆಗೆ ಕಾಡು ನಾಶಪಡಿಸುತ್ತಿರುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಲಗಾಮು ಹಾಕಿದ್ದಾರೆ.
‘ಹಂಪಿ ಉತ್ಸವ’ದ ನಿಮಿತ್ತ ಮಾತಂಗ ಪರ್ವತದಲ್ಲಿ ವಿದ್ಯುತ್ ತಂತಿ ಮತ್ತು ವಿದ್ಯುದ್ದೀಪಗಳನ್ನು ಅಳವಡಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್.ಐ.) ಹಾಗೂ ಜಿಲ್ಲಾ ಆಡಳಿತದಿಂದ ಕುರುಚಲು ಕಾಡು, ಮರಗಳನ್ನು ಕಡಿಯಲಾಗುತ್ತಿತ್ತು. ‘ಕಾಡು ನಾಶದಿಂದ ಅಲ್ಲಿ ನೆಲೆಸಿರುವ ಅಪರೂಪದ ಹಕ್ಕಿಗಳು ಹಾಗೂ ಸರೀಸೃಪಗಳ ಆವಾಸ ಸ್ಥಾನಕ್ಕೆ ಕಂಟಕ ಬಂದೊದಗಲಿದೆ’ ಎಂದು ಪರಿಸರವಾದಿಗಳು ತೀವ್ರ ಅಸಮಾಧಾನ ಹೊರಹಾಕಿ, ಜಿಲ್ಲಾ ಆಡಳಿತಕ್ಕೆ ಪತ್ರ ಬರೆದಿದ್ದರು. ಈ ಕುರಿತು ಸೋಮವಾರ ‘ಪ್ರಜಾವಾಣಿ’ಯಲ್ಲಿ ‘ಹಂಪಿ ಉತ್ಸವ’ಕ್ಕಾಗಿ ಕಾಡು ನಾಶ! ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಗೊಂಡಿತ್ತು.
ಪರಿಸರವಾದಿಗಳ ವಿರೋಧ ಹಾಗೂ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಿಂದ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಾಡು ನಾಶಪಡಿಸದಂತೆ ಸೂಚಿಸಿದ್ದಾರೆ. ‘ಮಾತಂಗ ಪರ್ವತಕ್ಕೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ತಕ್ಷಣದಿಂದಲೇ ಕೆಲಸ ನಿಲ್ಲಿಸುವಂತೆ ಎ.ಎಸ್.ಐ. ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ವಲಯ ಅರಣ್ಯ ಅಧಿಕಾರಿ ಎಂ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪರಿಸರವಾದಿಗಳು ಹಾಗೂ ವನ್ಯಜೀವಿ ಛಾಯಾಗ್ರಾಹಕರಾದ ಪಂಪಯ್ಯ ಮಳಿಮಠ, ಶಿವಶಂಕರ ಬಣಗಾರ, ಸಮದ್ ಕೊಟ್ಟೂರು, ಸಂತೋಷ್ ಮಾರ್ಟಿನ್ ಅವರು ಕಾಡು ನಾಶಕ್ಕೆ ವಿರೋಧ ವ್ಯಕ್ತಪಡಿಸಿ, ಜಿಲ್ಲಾ ಆಡಳಿತಕ್ಕೆ ಪತ್ರ ಬರೆದಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.