ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನನ್ನ ಮೇಲೆ ಮಾಟ ಮಾಡಿಸಿದ್ದಾರೆ. ಇದರಿಂದ ಸ್ವಲ್ಪ ದಿನಗಳು ಮಂಕಾಗಿದ್ದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಯಡಿಯೂರಪ್ಪ ಮಾಟಕ್ಕೆ ಪ್ರತಿತಂತ್ರ ರೂಪಿಸಿದ್ದೇನೆ. ಮತ್ತೆ ಹಿಂದಿನ ಹಳಿಗೆ ಮರಳಿದ್ದೇನೆ. ಮತ್ತೆ ಎಂದೂ ಹೆದರುವುದಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಯಡಿಯೂರಪ್ಪ ಬರೆದ ಡೈರಿ ವಿಚಾರ ಕುರಿತು ಸೂಕ್ತ ತನಿಖೆ ನಡೆಸಬೇಕು. ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪ ಆಪ್ತ ಸಹಾಯಕರ ವಿಚಾರಣೆ ನಡೆಸಬೇಕು. ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಕೇರಳದಲ್ಲಿ ಆದ ಮದುವೆ ವಿಚಾರವೂ ಹೊರಬರುತ್ತದೆ ಎಂದರು.
ಯಡಿಯೂರಪ್ಪ ಅಂಥವರೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ತಮ್ಮತನವನ್ನೇ ಮರೆತಿದ್ದಾರೆ.ಲೋಕಸಭಾ ಚುನಾವಣೆಯ ಮೂಲೆ ಗುಂಪಾಗುತ್ತಾರೆ. ಅಡ್ವಾಣಿ ರೀತಿ ಅವರನ್ನು ಬಿಜೆಪಿ ದೂರ ತಳ್ಳುತ್ತದೆ ಎಂದು ಭವಿಷ್ಯ ನುಡಿದರು.
ಕೇಂದ್ರ ಸರ್ಕಾರ ಅಂಬಾನಿಯಜಿಯೊ ಕಂಪನಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮುಚ್ಚುವ ಪ್ರಯತ್ನ ಮಾಡುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗೀನಾಥ್ ದೇಶದ ಸೈನಿಕರನ್ನು ಮೋದಿ ಸೈನಿಕರು ಎಂದು ಹೇಳಿಕೆ ನೀಡುವುದರ ಅವಮಾನಿಸಿದ್ದಾರೆ. ಮೋದಿ ಸೈನಿಕರನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.