ಬೆಂಗಳೂರು: ‘ಕುಟುಂಬವೇ ಮಕ್ಕಳ ಮೊದಲ ಪಾಠಶಾಲೆ.ಎಷ್ಟೋ ಮಕ್ಕಳು ತಮ್ಮ ಪೋಷಕರ ಜೊತೆ ಮುಕ್ತವಾಗಿ ಚರ್ಚೆ ಮಾಡುವುದಿಲ್ಲ.ಎಲ್ಲ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಬಂಧಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಏರ್ಪಡಬೇಕು’ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಕಿವಿಮಾತು ಹೇಳಿದರು.
ಎಂ.ಎಸ್.ರಾಮಯ್ಯ ಚಾರಿಟೀಸ್ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಬಲಿಜ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜನರಲ್ಲಿ ಅರ್ಹತೆ, ಪ್ರತಿಭೆಗಳಿದ್ದರೂ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಷ್ಟು ಕಲಿತರೂ ಸಾಲದು.ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯದ ಮೇಲೆ ಹಿಂಜರಿಕೆ ಹೆಚ್ಚು. ಅನೇಕರು ಮೊದಲು ಅನುತ್ತೀರ್ಣರಾಗಿ, ಬಳಿಕ ಹೆಚ್ಚು ಅಂಕ ಪಡೆದು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರುವ ಉದಾಹರಣೆಗಳಿವೆ. ಈ ರೀತಿ ಸವಾಲು ಎದುರಿಸುವ ಗುಣ ವಿದ್ಯಾರ್ಥಿಗಳಲ್ಲಿ ಮೂಡಬೇಕು’ ಎಂದರು.
ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ, ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ, ಫಾರ್ಮಸಿ, ಎಂಜಿನಿಯರಿಂಗ್ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಲಿಜ ಸಮುದಾಯದ 1,561 ವಿದ್ಯಾರ್ಥಿಗಳಿಗೆ ₹1 ಕೋಟಿ ಮೊತ್ತದ ಸಹಾಯಧನದ ಚೆಕ್ ವಿತರಿಸಲಾಯಿತು.
ಟ್ರಸ್ಟ್ನ ಎಂ.ಆರ್ ಸಂಪಂಗಿ ರಾಮಯ್ಯ, ಎಂ.ಆರ್.ಸೀತಾರಾಂ, ಪಟ್ಟಾಭಿರಾಂ, ಜಾನಕಿರಾಂ, ಎಂ.ಆರ್.ರಾಮಯ್ಯ ಇದ್ದರು.