ಬೆಂಗಳೂರು: ಆರ್ಕಿಡ್ ದಿ ಇಂಟರ್ನ್ಯಾಷನಲ್ ಶಾಲೆಯ ಮೂರು ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ, ತಿಪ್ಪಸಂದ್ರದ ‘ದಿ ಇಂದಿರಾನಗರ್ ಕೇಂಬ್ರಿಡ್ಜ್ ಇಂಗ್ಲಿಷ್ ಶಾಲೆ’ಯಲ್ಲಿ ಅಂತಹುದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಶಾಲೆಯ ಹಿಂದಿ ಶಿಕ್ಷಕ ಜೈಶಂಕರ್ (38), ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಈ ಸಂಬಂಧ ಬಾಲಕಿಯ ಪೋಷಕರು ದೂರು ಕೊಟ್ಟಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಜೀವನ್ಭಿಮಾನಗರ ಪೊಲೀಸರು ತಿಳಿಸಿದ್ದಾರೆ.
‘ಆರೋಪಿ ಅ.28 ಮತ್ತು ಅ.29ರಂದು ಶಾಲೆಯ ಬಾಲಕರ ಶೌಚಾಲಯದಲ್ಲಿ ಈ ಕೃತ್ಯ ಎಸಗಿದ್ದಾನೆ. ಬುಧವಾರ ತರಗತಿ ಮುಗಿಸಿಕೊಂಡು ಮಧ್ಯಾಹ್ನ 3.30ಕ್ಕೆ ಮನೆಗೆ ಮರಳಿದ ಬಾಲಕಿ, ಹೊಟ್ಟೆ ನೋವಿನಿಂದ ನರಳಿದ್ದಾಳೆ. ಹೀಗಾಗಿ ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಹೇಳಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಈ ಸಂಗತಿ ತಿಳಿದು ಗಾಬರಿಗೊಂಡ ಪೋಷಕರು, ಮಗಳನ್ನು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ಪೋಷಕರು ಮಕ್ಕಳ ಕಲ್ಯಾಣ ಸಮಿತಿಗೆ ವಿಷಯ ತಿಳಿಸಿ, ಅವರ ಸೂಚನೆಯಂತೆ ಜೆ.ಬಿ.ನಗರ ಠಾಣೆಗೆ ಬಂದು ದೂರು ಕೊಟದ್ದಾರೆ.
ತಿಪ್ಪಸಂದ್ರ ನಿವಾಸಿಯಾದ ಜೈಶಂಕರ್, 2 ವರ್ಷದಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮಗ ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾನೆ. ಕೆಲ ತಿಂಗಳ ಹಿಂದೆ ಹಿಂದಿ ಕಲಿಕೆಗಾಗಿ ಬಾಲಕಿ ಜೈಶಂಕರ್ ಮನೆಗೆ ಟ್ಯೂಷನ್ಗೆ ಹೋಗುತ್ತಿದ್ದಳು. ಆಗ, ಶಿಕ್ಷಕ ಅಸಭ್ಯವಾಗಿ ವರ್ತಿಸುವುದಾಗಿ ಬಾಲಕಿ ಹೇಳಿದ್ದರಿಂದ ಪೋಷಕರು ಟ್ಯೂಷನ್ ಬಿಡಿಸಿದ್ದರು.
‘ಬಾಲಕಿಯ ತಂದೆ ಕ್ಯಾಬ್ ಚಾಲಕರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಅವರು ನೀಡಿದ ದೂರಿನ ಅನ್ವಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2012 (ಪೋಕ್ಸೊ) ಮತ್ತು ಅತ್ಯಾಚಾರ (ಐಪಿಸಿ 376) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಹಾಗೂ ಬಾಲಕಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಪೂರ್ವ ವಿಭಾಗದ ಡಿಸಿಪಿ ಸತೀಶ್ ಕುಮಾರ್ ತಿಳಿಸಿದರು.
‘ಶಿಕ್ಷಕ ಜೈಶಂಕರ್ ಈ ಕೃತ್ಯ ಎಸಗಿರುವುದಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿವೆ. ಅಲ್ಲದೆ, ವಿದ್ಯಾರ್ಥಿನಿ ಕೂಡ ಈತನನ್ನೇ ಗುರುತಿಸಿದ್ದಾಳೆ. ಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ಗೊತ್ತುಪಡಿಸಿದ್ದ ಮಾರ್ಗಸೂಚಿಗಳನ್ನು ಶಾಲಾ ಆಡಳಿತ ಮಂಡಳಿ ಪಾಲಿಸಿಲ್ಲ. ಇಡೀ ಶಾಲೆಯಲ್ಲಿ ಕೇವಲ ಒಂದೇ ಒಂದು ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಹೀಗಾಗಿ ಶಾಲೆ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.
ಪೋಷಕರ ಆಕ್ರೋಶ: ವಿಷಯ ತಿಳಿದು ರಾತ್ರಿಯೇ ಶಾಲೆ ಬಳಿ ಜಮಾಯಿಸಿದ ಕೆಲ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ಕುಮಾರ್, ಡಿಸಿಪಿ ಸತೀಶ್ ಕುಮಾರ್ ಅವರು ಪೋಷಕರ ಮನವೊಲಿಸಿದರು.
ಹಿಂದಿನ ಪ್ರಕರಣಗಳು
* ಜುಲೈ 3: ವಿಬ್ಗಯೊರ್ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
* ಆಗಸ್ಟ್ 4: ಕನಕಪುರ ರಸ್ತೆಯ ಮಾರುತಿ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿಗೆ ಅತಿಥಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ
* ಅಕ್ಟೋಬರ್ 22: ಜಾಲಹಳ್ಳಿಯ ಆರ್ಕಿಡ್ ಶಾಲೆಯಲ್ಲಿ ಕಚೇರಿ ಸಹಾಯಕನಿಂದ 3 ವರ್ಷದ ನರ್ಸರಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.