ಬೆಂಗಳೂರು: ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಅಪಘಾತ ಸಂಭವಿಸಿದ್ದು, ಉಪನ್ಯಾಸಕ ಸೇರಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಹಳೇ ಮದ್ರಾಸ್ ರಸ್ತೆಯಲ್ಲಿ ಇನ್ನೋವಾ ಕಾರೊಂದು ಎದುರಿಗೆ ತೆರಳುತ್ತಿದ್ದ ಬೈಕ್ಗೆ ಗುದ್ದಿ ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅದರಿಂದಾಗಿ ಬೈಕ್ ಸವಾರ ವೆಂಕಟ್ ಶೇಷರೆಡ್ಡಿ (35) ಹಾಗೂ ಕಾರಿನಲ್ಲಿದ್ದ ತೇಜಸ್ (17) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ವೆಂಕಟ್ ಅವರ ಪತ್ನಿ ಪ್ರೀತಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ 8 ವರ್ಷದ ಮಗಳು ಕೀರ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ ಚಾಲಕ ಸೇರಿ ಏಳು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
‘ಮೃತ ವೆಂಕಟ್ ಶೇಷರೆಡ್ಡಿ, ನಾರಾಯಣ ಪಿ.ಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಮಗಳ ಜೊತೆಯಲ್ಲಿ ಬೈಕ್ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಹೇಳಿದರು.
ನೃತ್ಯ ಮುಗಿಸಿ ಹೊರಟಿದ್ದರು: ‘ಮೃತ ತೇಜಸ್, ಕೆ.ಆರ್.ಪುರ ನಿವಾಸಿ. ಡ್ಯಾನ್ಸರ್ ಆಗಿದ್ದ ಆತ ಹಾಗೂ ಆತನ ಸ್ನೇಹಿತರು, ನೃತ್ಯ ಕಾರ್ಯಕ್ರಮ ನಡೆಸಿಕೊಡುವುದಕ್ಕಾಗಿ ಸೋಮವಾರ ಸಂಜೆ ಬೆಂಗಳೂರಿಗೆ ಬಂದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಕಾರ್ಯಕ್ರಮ ಮುಗಿಸಿ ರಾತ್ರಿಯೇ ಇನ್ನೋವಾ ಕಾರಿನಲ್ಲಿ ಮನೆಯತ್ತ ಹೊರಟಿದ್ದರು. 8.30ರ ಸುಮಾರಿಗೆ ಚಾಲಕ ಸುಬ್ರಹ್ಮಣ್ಯ, ನಿರ್ಲಕ್ಷ್ಯದಿಂದ ವೇಗವಾಗಿ ಕಾರು ಚಲಾಯಿಸಿದ್ದ. ಕಾರನ್ನು ಬೈಕ್ಗೆ ಗುದ್ದಿಸಿ ರಸ್ತೆ ವಿಭಜಕಕ್ಕೂ ಡಿಕ್ಕಿ ಹೊಡೆಸಿದ್ದ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಯುವತಿಯರೂ ಇದ್ದರು. ಅಪಘಾತ ಸಂಬಂಧ ಅವರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ವಿವರಿಸಿದರು.
‘ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆತನ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ವಶಕ್ಕೆ ಪಡೆಯಲಿದ್ದೇವೆ’ ಎಂದು ಪೊಲೀಸರು ಹೇಳಿದರು.