ಬೆಂಗಳೂರು: ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದ್ರಾವ್ ವೃತ್ತದ ಬಳಿಯ ಮೇಲ್ಸೇತುವೆಯಲ್ಲಿ ಪಾದಚಾರಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿಗೆ 35ರಿಂದ 40 ವರ್ಷ ಇರಬಹುದೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ರಾತ್ರಿ 9.30ರ ವೇಳೆಯಲ್ಲಿ ವ್ಯಕ್ತಿ ನಡೆದು ತೆರಳುತ್ತಿದ್ದರು. ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಚಾಲಕ ವಾಹನ ನಿಲ್ಲಿಸದೇ ತೆರಳಿದ್ದಾನೆ. ಘಟನೆ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿದೆ. ವಾಹನದ ಮಾದರಿ ಸಹ ಪತ್ತೆಯಾಗಿಲ್ಲ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.