ಬೆಂಗಳೂರು: ‘ಕೋಟ್ಯಂತರ ಕನ್ನಡಿಗರ ಜನಮಾನಸದಲ್ಲಿ ಉಳಿದಿರುವ ‘ಅಪ್ಪು’ ಎಂದೂ ಬಾಡದ ಬೆಟ್ಟದ ಹೂವು’ ಎಂದು ನಟ ಶ್ರೀನಾಥ್ ಹೇಳಿದರು.
ನಗರದಲ್ಲಿ ಸನಾತನಿ ಸಾಹಿತ್ಯ ವೇದಿಕೆ ಮತ್ತು ಶ್ರೀಕೃಷ್ಣ ಕಲಾಸಂಗಮದ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕ ವೈ.ಬಿ.ಎಚ್. ಜಯದೇವ್ ಅವರು ನಟ ಪುನಿತ್ ರಾಜ್ಕುಮಾರ್ ಕುರಿತು ಬರೆದ ‘ಅಪ್ಪು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದು ಕೊಟ್ಟ ಅಪ್ಪು, ತನ್ನ ಅಪ್ರತಿಮ ಸಮಾಜಸೇವೆಯ ಮೂಲಕ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿ ಬೆಳೆದು ನಿಜವಾಗಿ ದೇವತಾ ಮನುಷ್ಯನೇ ಆದರು’ ಎಂದರು.
ಕೃತಿ ಲೇಖಕ ಜಯದೇವ್ ಮಾತನಾಡಿ, ‘ನಗುಮೊಗದ ಮೂಲಕ ಕನ್ನಡಿಗರ ಮನಗೆದ್ದ ಅಪ್ಪು ತಮ್ಮ ಪ್ರಾಂಜಲ ಸಮಾಜಸೇವೆಯ ಮೂಲಕ ಕನ್ನಡಿಗರ ಮನದಲ್ಲಿ ವಿರಾಜಮಾನರಾಗಿದ್ದಾರೆ. ಆನೆಯನ್ನು ಕನ್ನಡಿಯಲ್ಲಿ ತೋರಿಸುವಂತೆ, ಹಿಮಾಲಯ ಸದೃಶ ವ್ಯಕ್ತಿತ್ವದ ಅಪ್ಪು ಅವರನ್ನು ಈ ಪುಟ್ಟ ಕೃತಿಯ ಮೂಲಕ ಪರಿಚಯಸುವ ಪ್ರಯತ್ನ ಮಾಡಿದ್ದೇನೆ’ ಎಂದರು.
ಕಾದಂಬರಿಕಾರ್ತಿ ಮಮತಾ ವಾರನಹಳ್ಳಿ ಮಾತನಾಡಿ, ‘ನಮ್ಮ ವೇದಿಕೆಗಳ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ವಿನೂತನವಾಗಿ ಆಯೋಜಿಸುವ ಆಲೋಚನೆಯ ಜೊತೆಗೆ ‘ಅಪ್ಪು’ ಪುಸ್ತಕ ಬಿಡುಗಡೆಗೊಳಿಸಿದ ಕೃತಾರ್ಥತೆ ನಮ್ಮದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಟಿ ಶೈಲಶ್ರೀ ಸುದರ್ಶನ್, ಹಾಸ್ಯ ಕಲಾವಿದ ಬೆಂಗಳೂರು ನಾಗೇಶ್, ಎಸ್.ಕೆ.ಅನಂತ್, ಸಂಗೀತ ನಿರ್ದೇಶಕ ವೆಂಕಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ ಇದ್ದರು.