ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದವರಿಗೆ ನಗರದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿ ತಯಾರಾಗಿದೆ.
ಅಯೋಧ್ಯೆ ರಾಮಮಂದಿರದ ಪ್ರತಿಕೃತಿಯನ್ನು ವಾಸವಿ ದೇಗುಲದ ಅಳತೆಗೆ ತಕ್ಕಂತೆ ರೂಪಿಸಲಾಗಿದೆ. 24 ಅಡಿ ಉದ್ದ, 18 ಅಡಿ ಅಗಲದ ರಾಮಮಂದಿರದ ಗೋಪುರ 16 ಅಡಿಯಿದೆ.
ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರು ಈ ಪ್ರತಿಕೃತಿಯನ್ನು ಜ.22ರಂದು ಉದ್ಘಾಟಿಸಲಿದ್ದಾರೆ. ರಾಮನಿಗೆ ಅಭಿಷೇಕ, ಪೂಜೆ, ಭಜನೆಗಳು ನಡೆಯಲಿವೆ. ಜ.30ರವರೆಗೆ ಬೆಳಗ್ಗಿನಿಂದ ರಾತ್ರಿವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಜಯನಗರದ ಅಶೋಕ ಪಿಲ್ಲರ್ ಬಳಿ ಅಗ್ರಸೇನ ಭವನದಲ್ಲಿ ಭಾನುವಾರ ಮಾರವಾಡಿ ಯುವಕ ಮಂಚ್ ಆಯೋಜಿಸಿದ್ದ ಶ್ರೀರಾಮನ ಸುಂದರಕಾಂಡ ಪ್ರವಚನದಲ್ಲಿ ಶ್ರೀರಾಮ ಹಾಗೂ ಹನುಮನ ವೇಷ ಧರಿಸಿದ ಬಾಲಕರು ಗಮನಸೆಳೆದರು.
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಸುಂದರಕಾಂಡ ಪ್ರವಚನ: ನಗರದ ಜಯನಗರದ ಅಶೋಕ ಪಿಲ್ಲರ್ ಬಳಿ ಅಗ್ರಸೇನ ಭವನದಲ್ಲಿ ಭಾನುವಾರ ಮಾರವಾಡಿ ಯುವಕ ಮಂಚ್ ವತಿಯಿಂದ ಶ್ರೀರಾಮನ ಸುಂದರಕಾಂಡ ಪ್ರವಚನವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ಶ್ರೀರಾಮ, ಹನುಮ ಸಹಿತ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು. ನೂರಾರು ಜನರು ಪಾಲ್ಗೊಂಡಿದ್ದರು.
ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಗುಡ್ಡದ ದೇವಸ್ಥಾನದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ವಿಗ್ರಹಗಳನ್ನು ಭಾನುವಾರ ಅರ್ಚಕರು ಅಲಂಕಾರ ಮಾಡಿದರು. ಸೋಮವಾರ ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ.
ಬೆಂಗಳೂರು ಎಸ್ಬಿಎಂ ಸರ್ಕಲ್ನಲ್ಲಿ ಪ್ರತಿಷ್ಠಾಪಿಸಿರುವ ರಾಮನ ಪ್ರತಿಮೆಯೊಂದಿಗೆ ಹಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಫೋಟೊ ತೆಗೆದು ಸಂಭ್ರಮಿಸಿದರು.
ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಗುಡ್ಡದ ದೇವಸ್ಥಾನದಲ್ಲಿ ರಾಮ ಸೀತೆ ಲಕ್ಷ್ಮಣ ಆಂಜನೇಯರ ವಿಗ್ರಹಗಳಿಗೆ ಅರ್ಚಕರು ಭಾನುವಾರ ಅಲಂಕಾರ ಮಾಡಿದರು.
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಮನೆ, ದೇವಸ್ಥಾನಗಳಲ್ಲಿ ದೀಪೋತ್ಸವ ಆಚರಿಸಿ: ವಿಶ್ವ ಹಿಂದೂ ಪರಿಷತ್
ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸೋಮವಾರ ನಡೆಯುವುದರಿಂದ ಸಂಜೆ ಸೂರ್ಯಾಸ್ತದ ಬಳಿಕ ಮನೆಗಳ ಮುಂದೆ ಮತ್ತು ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ಆಚರಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ.
‘ಸುಮಾರು 500 ವರ್ಷಗಳ ಸಂಘರ್ಷದ ನಂತರ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ರಾಮನ ಜನ್ಮ ಸ್ಥಳದಲ್ಲಿಯೇ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದಿನವನ್ನು ಒಂದು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿವಿಧ ದೇವಸ್ಥಾನಗಳಲ್ಲಿ ಹೋಮ, ಯಜ್ಞ, ಪೂಜೆ, ಜಪ, ಭಜನೆ ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆಗೆ ನಗರದ ಹಲವು ದೇವಸ್ಥಾನಗಳಲ್ಲಿ ಎಲ್ಇಡಿ ಪರದೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ತಿಳಿಸಿದ್ದಾರೆ.
‘ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸುವಂತೆ ರಾಜ್ಯ ಸರ್ಕಾರವೇ ಸೂಚಿಸಿದೆ. ಪ್ರಾಣ ಪ್ರತಿಷ್ಠಾಪನೆಯನ್ನು ದೇವಸ್ಥಾನಗಳಿಗೆ ತೆರಳಿ, ವೀಕ್ಷಿಸಲು ಸಾಧ್ಯವಾಗದ ಉದ್ಯೋಗಸ್ಥರು, ವಿದ್ಯಾರ್ಥಿಗಳು ಸೇರಿ ವಿವಿಧ ವರ್ಗದವರಿಗೆ ಸಂಘ–ಸಂಸ್ಥೆಗಳು, ಶಾಲಾ–ಕಾಲೇಜುಗಳ ಆಡಳಿತ ಮಂಡಳಿ, ಸರ್ಕಾರಿ ಕಚೇರಿಗಳು, ಕಂಪನಿಗಳು ವ್ಯವಸ್ಥೆ ಮಾಡಿಕೊಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ ಗಾಣಿಗರಪೇಟೆ ರಾಮ ಭಕ್ತ ಮಂಡಳಿಯ ಆಯೋಜಿಸಿದ್ದ ರಾಮ ವಿಗ್ರಹ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಮ ಲಕ್ಷ್ಮಣ ಸೀತೆ ಮತ್ತು ಆಂಜನೇಯ ವೇಷಧಾರಿಗಳು
–ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
ಕಬ್ಬನ್ಪೇಟೆ ಮುಖ್ಯರಸ್ತೆಯಲ್ಲಿ ಗಾಣಿಗರಪೇಟೆ ರಾಮ ಭಕ್ತ ಮಂಡಳಿಯ ಆಯೋಜಿಸಿದ್ದ ರಾಮ ವಿಗ್ರಹ ಮೆರವಣಿಗೆಯಲ್ಲಿ ಸಂಘದ ಸದಸ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರುx
–ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.