ಬೆಂಗಳೂರು: ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ಸುರೇಶ್ (35) ಅವರನ್ನು ಕೊಲೆ ಮಾಡಲಾಗಿದ್ದು, ಸ್ನೇಹಿತರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.
‘ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದ ಸುರೇಶ್, ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ತಡರಾತ್ರಿ ಅವರ ಕೊಲೆಯಾಗಿದ್ದು, ಗುರುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಳೇಪೇಟೆ ರಸ್ತೆಯಲ್ಲಿರುವ ಡಾ. ರಾಜ್ಕುಮಾರ್ ಪ್ರತಿಮೆ ಬಳಿಯ ಜಾಗದಲ್ಲಿ ಬುಧವಾರ ರಾತ್ರಿ ಸೇರಿದ್ದ ಸುರೇಶ್ ಹಾಗೂ ಸ್ನೇಹಿತರು, ಮದ್ಯದ ಪಾರ್ಟಿ ಮಾಡಿದ್ದರು. ಮದ್ಯದ ಅಮಲಿನಲ್ಲಿದ್ದ ಸ್ನೇಹಿತರು ಹಾಗೂ ಸುರೇಶ್ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು’
‘ಸುರೇಶ್ ಹಾಗೂ ಸ್ನೇಹಿತರು, ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸುರೇಶ್ ಅವರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಸ್ಥಳದಿಂದ ಪರಾರಿಯಾಗಿದ್ದಾರೆ. ಕುಸಿದು ಬಿದ್ದ ಸ್ಥಳದಲ್ಲಿಯೇ ಸುರೇಶ್ ಮೃತಪಟ್ಟಿದ್ದರು. ಗುರುವಾರ ಬೆಳಿಗ್ಗೆ ಮೃತದೇಹ ಗಮನಿಸಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.