ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರು ಮಂದಿಗೆ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ ಪ್ರದಾನ

Published 31 ಮೇ 2024, 17:53 IST
Last Updated 31 ಮೇ 2024, 17:53 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾಭಿಮಾನಿ ಕರ್ನಾಟಕ ವೇದಿಕೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆರು ಮಂದಿಗೆ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. 

ಎಚ್.ಎಸ್.ಎಂ.ಪ್ರಕಾಶ್, ಎಚ್.ಟಿ.ಪೋತೆ, ಫಾತಿಮಾ ರಲಿಯಾ, ಸಂತೋಷ ನಾಯಕ, ಇಂದಿರಾ ಕೃಷ್ಣಪ್ಪ ಹಾಗೂ ಎಂ.ಎಸ್.ಮಣಿ ಅವರ ಕೃತಿಗಳು ಪ್ರಶಸ್ತಿಗೆ ಭಾಜನವಾಗಿದ್ದವು. ಕೃತಿಯ ಲೇಖಕರು ಹಾಗೂ ಲೇಖಕಿಯರಿಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು. ಪ್ರಶಸ್ತಿಯು ತಲಾ ₹ 5 ಸಾವಿರ ನಗದು ಒಳಗೊಂಡಿದೆ. 

‘ಪುಸ್ತಕ ಎನ್ನುವುದು ನಮ್ಮ ಸ್ನೇಹಿತನಿದ್ದಂತೆ. ನಾವು ವಾರಪತ್ರಿಕೆಗಳಿಗೆ ಕಾಯುತ್ತಿದ್ದೆವು. ಆದರೆ, ಇಂದಿನ ಯುವಪೀಳಿಗೆ ಓದುವ ಹವ್ಯಾಸವನ್ನು ಅಷ್ಟಾಗಿ ಬೆಳೆಸಿಕೊಂಡಿಲ್ಲ’ ಎಂದು ಕೆ.ವಿ.ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು. 

ಸ್ವಾಭಿಮಾನಿ ಕರ್ನಾಟಕ ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ, ‘ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವುದಕ್ಕೆ ಪ್ರತಿಭಟನೆ, ಮುಷ್ಕರವೊಂದೇ ಮಾರ್ಗವಲ್ಲ. ಸಾಹಿತ್ಯಿಕ ಚಟುವಟಿಕೆಗಳಿಂದಲೂ ಭಾಷೆಯನ್ನು ಉಳಿಸಿ ಬೆಳೆಸಬಹುದು. ಆದ್ದರಿಂದ ನಾವು ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ’ ಎಂದು ಹೇಳಿದರು. ‌

ಪ್ರಶಸ್ತಿ ಪುರಸ್ಕೃತ ಎಚ್.ಎಸ್.ಎಂ.ಪ್ರಕಾಶ್, ‘ಮೂಲ ಕೃತಿಗೆ ಚ್ಯುತಿ ಬಾರದಂತೆ ಅದರ ಜೀವಾಳವನ್ನು ಓದುಗರಿಗೆ ತಲುಪಿಸುವುದು ಸುಲಭವಲ್ಲ. ಹೀಗಾಗಿ, ಲೇಖಕರ ಜತೆಗೆ ಅನುವಾದಕರನ್ನೂ ಗುರುತಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.  

ಮತ್ತೋರ್ವ ಪ್ರಶಸ್ತಿ ಪುರಸ್ಕೃತ ಎಚ್.ಟಿ.ಪೋತೆ, ‘ಈ ಹಿಂದೆ ನಾನು ಅಂಬೇಡ್ಕರ್‌ ಅವರ ಲಂಡನ್‌ ಮನೆಗೆ ಭೇಟಿ ನೀಡಿ, ಆ ಬಗ್ಗೆ ಪ್ರವಾಸ ಕಥನವನ್ನು ‘ಪ್ರಜಾವಾಣಿ’ಗೆ ಬರೆದಿದ್ದೆ. ಅದಕ್ಕೆ ‘ಬಾಬಾ ಸಾಹೇಬರ ಲಂಡನ್‌ ಮನೆಯಲ್ಲಿ’ ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು. ಅದೇ ಶೀರ್ಷಿಕೆಯಡಿ ಪುಸ್ತಕವನ್ನೂ ಹೊರತರಲಾಗಿದೆ’ ಎಂದು ಸ್ಮರಿಸಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT