ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಂಎ ವಂಚನೆಯಲ್ಲಿ ಆರೋಪಿಗಳ ‍ಪಾತ್ರವಿಲ್ಲ’

ಐಎಂಎ ಪ್ರಕರಣದಲ್ಲಿ 9 ಮಂದಿಗೆ ಜಾಮೀನು
Last Updated 10 ಡಿಸೆಂಬರ್ 2019, 19:38 IST
ಅಕ್ಷರ ಗಾತ್ರ

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ನಾವೀದ್ ಅಹಮದ್, ಅರ್ಷದ್ ಖಾನ್, ಅಪ್ಸರ್ ಪಾಷಾ, ದಾದಾಪೀರ್, ಶದಾಬ್ ಅಹಮದ್ ಖಾನ್, ಇಸ್ರಾರ್ ಅಹಮದ್ ಖಾನ್, ಫುಜೈಲ್ ಅಹಮದ್, ಮೊಹಮದ್ ಇದ್ರೀಸ್ ಮತ್ತು‌ ಅಬ್ರೇಸ್‌ ಅವರು ಐಎಂಎ ವಂಚನೆ ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸದೆ ಇರುವುದರಿಂದ ಸಿಬಿಐ ಕೋರ್ಟ್‌ ಜಾಮೀನು ನೀಡಿದೆ.

ಸಿಬಿಐ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣನವರ, ಜಾಮೀನು ನೀಡಲು ಕಾರಣವಾದ ಅಂಶವನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಕಂಪನಿಗೆ ಠೇವಣಿ ಸಂಗ್ರಹಿಸುವಲ್ಲಿ ಆರೋಪಿಗಳ ಪಾತ್ರವಿಲ್ಲ. ಹೂಡಿಕೆ ಮಾಡುವಂತೆ ಜನರನ್ನು ಪ್ರೇರೇಪಿಸಿಲ್ಲ. ಈ ಪ್ರಕರಣದಲ್ಲಿ ಒಂದನೇ ಆರೋಪಿ ಮನ್ಸೂರ್‌ ಖಾನ್‌ ಮಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಸಂಗತಿ ಸಾಕ್ಷ್ಯ ಗಳ ವಿಚಾರಣೆಯಿಂದ ಗೊತ್ತಾಗುತ್ತದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

‘ಸಿಬಿಐ ಪ್ರಕರಣ ದಾಖಲೆಗಳನ್ನು ಆಧರಿಸಿದೆ. ಸದರಿ ಆರೋಪಿಗಳ ವಿರುದ್ಧದ ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳಿಗೆ ಜಾಮೀನು ಸಿಕ್ಕರೆ ದೇಶ ಬಿಟ್ಟು ಪರಾರಿಯಾಗುತ್ತಾರೆ ಎಂಬ ಪ್ರಾಸಿಕ್ಯೂಷನ್‌ ವಾದದಲ್ಲಿ ಹುರುಳಿಲ್ಲ. ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಜಾಮೀನು ನೀಡಬಹುದಾಗಿದೆ’ ಎಂದು ಆದೇಶದಲ್ಲಿ ಹೇಳಿದ್ದಾರೆ.

ಸಿಬಿಐ ಪರ ವಾದ ಮಂಡಿಸಿದ ವಕೀಲರು, ‘ವಂಚನೆ ಪ್ರಕರಣದ ತನಿಖೆ ಬಹುಮುಖ್ಯ ಘಟ್ಟ ತಲುಪಿರುವುದರಿಂದ ಜಾಮೀನು ಕೊಡುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

‘4ನೇ ಆರೋಪಿ ಕಂಪನಿ ವ್ಯವಸ್ಥಾಪಕ (ನಿರ್ವಹಣೆ) ಆಗಿದ್ದು, ಅಧಿಕಾರಿಗಳಿಗೆ ಲಂಚ ನೀಡಿರುವುದರಲ್ಲೂ ಅವರ ಪಾತ್ರವಿದೆ’ ಎಂದು ಸಿಬಿಐ ವಕೀಲರು ವಾದಿಸಿದ್ದರು.

‘ಆರೋಪಿಗಳು ಕೇವಲ ನೌಕರ ರಾಗಿದ್ದು, ಅವರಿಗೆ ಗೊತ್ತಿಲ್ಲ ದಂತೆ ಕಂಪನಿಯ ನಿರ್ದೇಶಕರಾಗಿಯೂ ಆರೋಪಿ ಮನ್ಸೂರ್‌ ಖಾನ್‌ ನೇಮಿ ಸಿದ್ದಾರೆ. ಪ್ರಕರಣದಲ್ಲಿ ಅವರ ಪಾತ್ರ ಇಲ್ಲದಿರುವುದರಿಂದ ಜಾಮೀನು ನೀಡಲು ಅಡ್ಡಿಯಿಲ್ಲ ಎಂದು ಆರೋಪಿಗಳ ಪರ ವಕೀಲರು ಪ್ರತಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT