ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರದಿಂದ ಪ್ರತಿಭಟನೆ ನಡೆಸುತ್ತಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ (ಬೇಸ್) ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ನಿಂಗೇಗೌಡ ಶನಿವಾರ ಭೇಟಿ ಮಾಡಿದರು.
ವಿಶೇಷ ಅಧಿಕಾರಿಯ ಭೇಟಿ ವೇಳೆ ಪ್ರತಿಯೊಂದು ಬೇಡಿಕೆಗೆ ಸ್ಪಷ್ಟ ಉತ್ತರ ನೀಡುವಂತೆ ಬೇಸ್ ನಿರ್ದೇಶಕ ಎಂ.ಲಕ್ಷ್ಮೀನಾರಾಯಣ ಅವರಿಗೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಆದರೆ, ವಿದ್ಯಾರ್ಥಿಗಳಿಗೆ ‘ಸಮಾಧಾನಕರ ಉತ್ತರ’ ಸಿಗಲಿಲ್ಲ.
‘ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಬೇಸ್ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ಏರ್ಪಡಿಸಿದ್ದಾರೆ. ಸಿಇಒ ಮತ್ತು ಸಿಒಇ ಹುದ್ದೆಯಲ್ಲಿ ಇರುವವರನ್ನು ತೆಗೆಯಲು ನೀವು ನೀಡಿರುವ 35ಕ್ಕೂ ಹೆಚ್ಚು ಕಾರಣಗಳನ್ನು ಸಚಿವರ ಗಮನಕ್ಕೆ ತರುತ್ತೇನೆ’ ಎಂದು ನಿಂಗೇಗೌಡ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
‘ಮೌಲ್ಯಮಾಪನ ವ್ಯವಸ್ಥೆ ಸುಧಾರಣೆ ಕುರಿತು ಬೋಧಕರು ಹಾಗೂ ವಿದ್ಯಾರ್ಥಿಗಳ ಜತೆ ಚರ್ಚಿಸಲಾಗುವುದು’ ಎಂದು ಲಕ್ಷ್ಮೀನಾರಾಯಣ ಭರವಸೆ ನೀಡಿದರು.