ಇಂಪಾಲ: ಪೂರ್ವ ಇಂಪಾಲದ ಬಿಎಸ್ಎಫ್ ಶಿಬಿರದ ಹೊರಗೆ ಕಚ್ಚಾ ಬಾಂಬ್ ಬಳಸಿ ಗಡಿ ಭದ್ರತಾ ಪಡೆಯ ಇಬ್ಬರು ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದಾರೆ.
ದಿಮಾಪುರ–ಇಂಪಾಲ ಹೆದ್ದಾರಿಗೆ ಸಮೀಪದಲ್ಲಿರುವ ಕೊಯಿರೆಂಗೀ ಕೇಂದ್ರ ಕಚೇರಿಯ ಬಳಿ ನಿಯೋಜನೆಗೊಂಡಿದ್ದ ಯೋಧರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.
‘ಗಾಯಗೊಂಡವರನ್ನು ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ರಿಮ್ಸ್) ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಯೋಧರು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜಯ್ ಟಿರ್ಕೆ ಮತ್ತು ಎನ್. ನಿಂಗ್ಥೌಬಾ ಮೀಟೈ ಸಾವಿಗೀಡಾದ ಯೋಧರು. ರಸ್ತೆ ರಕ್ಷಣೆ ಕಾರ್ಯಕ್ಕೆ ಇವರನ್ನು ನಿಯೋಜಿಸಲಾಗಿತ್ತು. ಇದುವರೆಗೂ ಯಾವ ಸಂಘಟನೆಯೂ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ.