ಬೆಂಗಳೂರು: ಬೇಗೂರು ಠಾಣೆ ವ್ಯಾಪ್ತಿಯ ಚೌಡೇಶ್ವರಿ ಬಡಾವಣೆಯಲ್ಲಿ ಚಂದ್ರಕಲಾ (40) ಹಾಗೂ ಅವರ ಮಗು ರಾತನ್ಯ (4) ಹತ್ಯೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
‘ಮುಖಕ್ಕೆ ಮಾಸ್ಕ್ ಹಾಗೂ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಮನೆಗೆ ನುಗ್ಗಿದ್ದ ಆರೋಪಿ, ತಾಯಿ ಹಾಗೂ ಮಗುವನ್ನು ಕೊಂದು ಪರಾರಿಯಾಗಿದ್ದಾನೆ. ಆತ ಯಾರು ಎಂಬುದನ್ನು ಪತ್ತೆ ಮಾಡಲು ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಮೃತ ಚಂದ್ರಕಲಾ, ಆಯುರ್ವೇದ ಔಷಧಿಯ ಆನ್ಲೈನ್ ಮಾರಾಟದ ವ್ಯಾಪಾರ ಮಾಡುತ್ತಿದ್ದರು. ಈ ಸಂಬಂಧ ಹಲವರನ್ನು ಸಂಪರ್ಕಿಸುತ್ತಿದ್ದರು. ವ್ಯಾಪಾರ ಸೋಗಿನಲ್ಲೇ ಆರೋಪಿ ಮನೆಗೆ ಬಂದು ಕೃತ್ಯ ಎಸಗಿರುವ ಮಾಹಿತಿಯೂ ಇದೆ’ ಎಂದರು.