ರಾಜರಾಜೇಶ್ವರಿನಗರ: ಹಲವು ಆಶ್ವಾಸನೆಗಳೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶೇ 10ರಷ್ಟು ಭರವಸೆಗಳನ್ನೂ ಈಡೇರಿಸಲು ವಿಫಲವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಮೆಲ್ ಬಡಾವಣೆ, ಗಟ್ಟಿಗೆರೆ ಹಾಗೂ ಇನ್ನಿತರ ಬಡಾವಣೆಗಳಲ್ಲಿ ಮತಯಾಚನೆ ನಡೆಸಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಬಡವರು, ಕೂಲಿಕಾರ್ಮಿಕರು, ಮಧ್ಯಮ ವರ್ಗದವರ ಬದುಕನ್ನು ಮೂರಾಬಟ್ಟೆಯಾಗಿಸಿದೆ’ ಎಂದು ಕಿಡಿಕಾರಿದರು.
‘ಕಾಂಗ್ರೆಸ್ ತನ್ನದೇ ಆದ ಇತಿಹಾಸ ಹೊಂದಿದೆ. ಶೋಷಿತರು, ದಲಿತರು ಹಾಗೂ ಹಿಂದುಳಿದವರ ಏಳಿಗೆಗೆ ಪಕ್ಷವು ಅಪಾರ ಕೊಡುಗೆ ನೀಡಿದೆ’ ಎಂದರು.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಕಾಂಗ್ರೆಸ್ ಮುಖಂಡ ರಾಜೇಶ್ ಗೂಳಿಗೌಡ, ಬಿ.ಎಚ್.ಚಂದ್ರಶೇಖರ್, ಶಿವನಂಜಯ್ಯ, ಸುಲಕ್ಷಣ ಭೈರಪ್ಪ, ನೇತ್ರ, ದಿವಾಕರ್, ಕೆಂಪೇಗೌಡ, ಕೆಪಿಸಿಸಿ ವಕ್ತಾರರಾದ ಪ್ರೊ.ಸಿದ್ದರಾಜು ಉಪಸ್ಥಿತರಿದ್ದರು.