ಬೆಂಗಳೂರು: ‘ಬಿಇಎಲ್, ಯಲಹಂಕ ಸೇರಿದಂತೆ ನಗರದಲ್ಲಿರುವ ತೆಲುಗು ಶಾಲೆಗಳಲ್ಲಿ ತೆಲುಗು ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಆ ಶಾಲೆಗಳಿಗೆ ತೆಲುಗು ಶಿಕ್ಷಕರನ್ನು ನೇಮಿಸಬೇಕು’ ಎಂದುಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಎ.ರಾಧಾಕೃಷ್ಣ ರಾಜು ಮನವಿ ಮಾಡಿದರು.
ತೆಲುಗು ವಿಜ್ಞಾನ ಸಮಿತಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದಯುಗಾದಿ ಉತ್ಸವ ಹಾಗೂ ‘ಶ್ರೀಕೃಷ್ಣದೇವರಾಯ ಪುರಸ್ಕಾರ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅನಂತಪುರ, ಹಿಂದೂಪುರ, ಮಂತ್ರಾಲಯ, ರಾಯಚೂರು ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿರುವ ಕನ್ನಡ ಶಾಲೆಗಳಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣರಾಜ್ಯ ಸರ್ಕಾರಗಳು ಎಲ್ಲ ರೀತಿಯ ಸಹಕಾರ ನೀಡುತ್ತಿವೆ’ ಎಂದರು.
‘ತಮಿಳುನಾಡು ಸರ್ಕಾರ ಅನುಸರಿಸುತ್ತಿರುವ ದ್ವಿಭಾಷಾ ನೀತಿಯಿಂದಾಗಿ ಗಡಿ ಜಿಲ್ಲೆಗಳಲ್ಲಿ ಓದುತ್ತಿರುವ ತೆಲುಗು ಮತ್ತು ಕನ್ನಡ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಾವಿರಾರು ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಕಲಿಯುವ ಹಕ್ಕು ಕಳೆದುಕೊಂಡಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಹಕ್ಕನ್ನು ತಮಿಳುನಾಡು ಸರ್ಕಾರ ತುಳಿಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ತಮಿಳುನಾಡಿನಲ್ಲೂ ತ್ರಿಭಾಷಾ ನೀತಿಯನ್ನು ಜಾರಿ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ಈ ವಿಚಾರದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಗಡಿ ಜಿಲ್ಲೆಗಳಲ್ಲಿನ ತೆಲುಗು ಮತ್ತು ಕನ್ನಡದ ವಿದ್ಯಾರ್ಥಿಗಳಿಗೆನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.
ತೆಲುಗು ವಿಜ್ಞಾನ ಸಮಿತಿ ವತಿಯಿಂದ ತೆಲುಗು ಹಾಸ್ಯ ನಟ ಆಲಿ ಮತ್ತು ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಸರಿಗಮ ವಿಜಿ ಅವರಿಗೆ ‘ಶ್ರೀಕೃಷ್ಣದೇವರಾಯ ಪುರಸ್ಕಾರ’ ಪ್ರದಾನ ಮಾಡಲಾಯಿತು.