ಬೊಮ್ಮನಹಳ್ಳಿ: ಬನ್ನೇರುಘಟ್ಟ ರಸ್ತೆ ಅರಕೆರೆಯಲ್ಲಿ ₹4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೆರಿಗೆ ಆಸ್ಪತ್ರೆ ಯನ್ನು ಶಾಸಕ ಎಂ.ಸತೀಶ್ ರೆಡ್ಡಿ ಶನಿವಾರ ಉದ್ಘಾಟಿಸಿದರು.
ಮೂರು ಅಂತಸ್ತಿನ ಕಟ್ಟಡದಲ್ಲಿ 90 ಹಾಸಿಗೆಗಳು, ಲ್ಯಾಬೋರೇಟರಿ, ಸಾಮಾನ್ಯ ಚಿಕಿತ್ಸಾ ವಿಭಾಗ, ಔಷಧ ವಿಭಾಗ ಇತ್ಯಾದಿ ಸೌಲಭ್ಯಗಳು ಇವೆ. ಬೊಮ್ಮನಹಳ್ಳಿ ಕ್ಷೇತ್ರದ ಜನರಿಗೆ ಇದರಿಂದ ಪ್ರಯೋಜನ ಆಗಲಿದೆ.
‘ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಹೆರಿಗೆ ಆಸ್ಪತ್ರೆ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ತಾಲ್ಲೂಕು ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸುವೆ’ ಎಂದು ಸತೀಶ್ ರೆಡ್ಡಿ ಹೇಳಿದರು.
ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ, ‘ಈ ಹೆರಿಗೆ ಆಸ್ಪತ್ರೆ ಶಸ್ತ್ರ ಚಿಕಿತ್ಸೆಯೂ ಒಳಗೊಂಡು ಎಲ್ಲ ಸೌಲಭ್ಯಗಳು ದೊರಕುವಂತಹ ಆಸ್ಪತ್ರೆಯಾಗಿ ನಿರ್ಮಾಣ ಮಾಡುವ ಕನಸಿದೆ. ನನ್ನ ಅವಧಿಯೊಳಗೆ ಮಾಡಿಯೇ ತೀರುತ್ತೇನೆ’ ಎಂದರು. ಸಂಸದ ತೇಜಸ್ವಿ ಸೂರ್ಯ, ಆಂಬುಲೆನ್ಸ್ ಗಾಗಿ ‘ಸಂಸದರ ನಿಧಿ’ ₹15 ಲಕ್ಷ ನೀಡುವುದಾಗಿ ಘೋಷಿಸಿದರು.
ಆಸ್ಪತ್ರೆಗಾಗಿ 10 ಸಾವಿರ ಅಡಿ ಜಮೀನು ದಾನ ಮಾಡಿದ ಎ.ಬಿ.ಸೂರ್ಯಪ್ಪ ಕುಟುಂಬದವರು ಹಾಗೂ ಆಡುಗೋಡಿಯ ನಲ್ಲಪ್ಪ, ವೈದ್ಯಾಧಿಕಾರಿ ಡಾ.ಧನ್ಯಕುಮಾರ್, ಸ್ಥಳೀಯ ಬಿಜೆಪಿ ಮುಖಂಡ ಮುರಳೀಧರ್ ಇದ್ದರು.
ಇದೇ ಸಂದರ್ಭದಲ್ಲಿ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ 20 ಆಟೊರಿಕ್ಷಾ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.