ಬೆಂಗಳೂರು: ‘ವ್ಯಕ್ತಿಯೊಳಗಿನ ತಾಯ್ತನ ಕಳೆದುಹೋಗುತ್ತಿರುವುದ ರಿಂದ ಸಮಾಜದಲ್ಲಿ ಬಿಕ್ಕಟ್ಟುಗಳು ಹೆಚ್ಚಾಗುತ್ತಿವೆ’ ಎಂದು ಪತ್ರಕರ್ತೆ ಡಾ.ವಿಜಯಾ ಹೇಳಿದರು.
ಬಹುರೂಪಿ ಪ್ರಕಾಶನದ ಕಿರುಚಿತ್ರ ನಿರ್ದೇಶಕ ಜಯರಾಮಾಚಾರಿ ಅವರ ಕೃತಿ ‘ನನ್ನವ್ವನ ಬಯೋಗ್ರಫಿ’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಪ್ರತಿಯೊಬ್ಬರಲ್ಲೂ ತಾಯ್ತನವಿದ್ದರೆ ಸಮಾಜ ಆರೋಗ್ಯಕರವಾಗಿರುತ್ತದೆ. ತಾಯಿ ತನ್ನನ್ನು ಕಷ್ಟಕ್ಕೆ ಒಡ್ಡಿಕೊಂಡೇ ಕುಟುಂಬದ ಸ್ವಾಸ್ಥ್ಯ ರಕ್ಷಿಸುತ್ತಾಳೆ. ತಾಯ್ತನದ ಗುಣವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅಂತಹ ತಾಯ್ತನವನ್ನು ಕಾಪಾಡೋಣ’ ಎಂದರು.
ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ‘ರಂಗಭೂಮಿ ಹೃದಯಕ್ಕೆ ಹತ್ತಿರವಾಗುವುದೇ ಅದರ ತಾಯ್ತನದ ಗುಣದಿಂದ’ ಎಂದರು.
ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ‘ತಾಯಂದಿರನ್ನು ಗೌರವಿಸುವ, ಪ್ರೀತಿಸುವವರಿಗಾಗಿ ಪ್ರತೀ ವರ್ಷ ತಾಯಿಯನ್ನು ಕುರಿತ ಒಂದು ಕೃತಿ ಬಹುರೂಪಿ ಪ್ರಕಟಿಸುತ್ತದೆ‘ ಎಂದು ಘೋಷಿಸಿದರು.
ಲೇಖಕ ಎ.ಆರ್.ಮಣಿಕಾಂತ್, ಬಹುರೂಪಿ ಸಂಸ್ಥಾಪಕಿ ಶ್ರೀಜಾ ವಿ.ಎನ್ ಇದ್ದರು.