ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ನಗರ ಪ್ರದಕ್ಷಿಣೆ ಕೈಗೊಂಡರು.
ಗೃಹ ಕಚೇರಿ ಕೃಷ್ಣಾದಿಂದ 9.30ಕ್ಕೆ ಸಿಲ್ಕ್ ಬೋರ್ಡ್ ಕಡೆಗೆ ಬಿಎಂಟಿಸಿ ವೋಲ್ವ ಬಸ್ನಲ್ಲಿ ಪ್ರಯಾಣ ಆರಂಭಿಸಿದರು.
ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಬನ್ನೇರುಘಟ್ಟ ರಸ್ತೆ ಟಿಡಿಆರ್ ಸಮಸ್ಯೆಗೆ ಪರಿಹಾರ ದೊರಕಲಿದೆ. ಬಿಎಂಆರ್ಸಿಎಲ್ನಿಂದ ಪರಿಹಾರ ನೀಡುವುದಾಗಿಯೂ ಭರವಸೆ ನೀಡಿದರು.
150 ಮೀಟರ್ ರಸ್ತೆ ಶೇ.25ರಷ್ಟು ಟಿಡಿಆರ್ (ಹಕ್ಕುಪತ್ರ ವರ್ಗಾವಣೆ) ಮಾಡಲಾಗಿದೆ. ಉಳಿದ ಶೇ.75 ಕಗ್ಗಂಟಾಗಿದ್ದು, ಇದಕ್ಕೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಸಿ.ಎಂಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ.
ಈ ವೇಳೆ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್, ಮೇಯರ್ ಗಂಗಾಂಬಿಕೆ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಸಂಸದ ಪಿ.ಸಿ. ಮೋಹನ್ ಜತೆ ಇದ್ದರು.
ಆಯುಕ್ತ,ಉಪಮೇಯರ್ ನಡುವೆ ಮಾತಿನ ಚಕಮಕಿ
ನಗರ ಪ್ರದಕ್ಷಿಣೆ ವೇಳೆ ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಹಾಗೂ ಉಪಮೇಯರ್ ಭದ್ರೇಗೌಡರ ನಡುವೆ ಮಾತಿನ ಚಕಮಕಿ ನಡೆಯಿತು. 'ಈ ಕಡೆ ಸರಿ' ಎಂದ ಆಯುಕ್ತರ ಹೇಳಿಕೆಗೆ ಮುನಿಸಿಕೊಂಡ ಉಪಮೇಯರ್ ನಗರ ಪ್ರದಕ್ಷಿಣೆ ಅರ್ಧಕ್ಕೆ ಮೊಟಕುಗೊಳಿಸಿ ಹಿಂದಿರುಗಿದರು.