ಬೆಂಗಳೂರು: ‘ಆರ್ಟಿಇ (ಕಡ್ಡಾಯ ಶಿಕ್ಷಣ ಹಕ್ಕು) ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳೆಯ ಮಾದರಿಯಲ್ಲೇ ಆರ್ಟಿಇ ಪಾಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಆರ್ಟಿಇ ಅರ್ಜಿ ಸಲ್ಲಿಸಬೇಕಾದ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ’ ಎಂದರು.
ಮೊದಲು ಸರ್ಕಾರಿ ಶಾಲೆಗೆ ಸೇರಿಸಲಿ!
ಸಾಹಿತಿಗಳು ಮತ್ತು ಕನ್ನಡ ಸಂಘಟನೆಗಳ ಮುಖಂಡರು ತಮ್ಮ ಮಕ್ಕಳನ್ನು ಮೊದಲು ಸರ್ಕಾರಿ ಶಾಲೆಗಳಿಗೆ ಸೇರಿಸಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಕನ್ನಡ ಕಲಿಸದ ಶಾಲೆಗಳ ಮೇಲೆ ನಿಯಂತ್ರಣ ಸಾಧಿಸಲು ₹500 ದಂಡ ವಿಧಿಸಲಾಗುತ್ತಿದೆಯೇ ಹೊರತು, ಹಣ ಸಂಗ್ರಹಿಸಲು ಅಲ್ಲ. ಕನ್ನಡ ಬೆಳೆಸುವುದು ಮಾತ್ರ ನಮ್ಮ ಉದ್ದೇಶ. ಆರೋಪ ಮಾಡುವವರು ಮತ್ತು ದಂಡದ ಪ್ರಮಾಣ ಕಡಿಮೆ ಇದೆ ಎನ್ನುವವರು ಇದನ್ನು ಅರ್ಥ ಮಾಡಿಕೊಳ್ಳಲಿ’ ಎಂದರು.