ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಚಾಲಕ ಹಿಂದೇಟು ಹಾಕಿದ್ದು, ಚಾಲಕನ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ ನಡೆದ ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಸಾರ್ವಜನಿಕರು, ಕಾರು (ಕೆಎ 01 ಜಿ 5958) ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
‘ಯುವತಿಯೊಬ್ಬರು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಸಿರ್ಸಿ ವೃತ್ತದ ಮೇಲ್ಸೇತುವೆಯಲ್ಲಿ ತೆರಳುತ್ತಿದ್ದರು. ಇದೇ ವೇಳೆ ಅಪಘಾತ ಸಂಭವಿಸಿತ್ತು. ದ್ವಿಚಕ್ರ ವಾಹನ ಉರುಳಿ ಬಿದ್ದಿತ್ತು. ರಸ್ತೆಯಲ್ಲೇ ಬಿದ್ದು ಯುವತಿ ನರಳಾಡುತ್ತಿದ್ದರು. ರಕ್ಷಣೆಗೆ ಬಂದ ಸಾರ್ವಜನಿಕರು, ನೀರು ಕುಡಿಸಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
‘ಮೇಲ್ಸೇತುವೆಯಲ್ಲಿ ಹೊರಟಿದ್ದ ಪೊಲೀಸ್ ಅಧಿಕಾರಿಯೊಬ್ಬರ ಕಾರು ನಿಲ್ಲಿಸಿ, ಗಾಯಾಳುವನ್ನು ಆಸ್ಪತ್ರೆಗೆ ಕರೆ ದೊಯ್ಯಲು ಸಹಾಯ ಮಾಡುವಂತೆ ಸಾರ್ವಜನಿಕರು ಕೋರಿದ್ದರು. ಇದನ್ನು ನಿರಾಕರಿಸಿದ್ದ ಚಾಲಕ, ಸ್ಥಳದಿಂದ ಹೊರಟ. ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ’ ಎಂದರು.