ಕೆಂಗೇರಿ: ಥಳಿತಕ್ಕೆ ಸರಗಳ್ಳನೊಬ್ಬ ಮೃತಪಟ್ಟ ಘಟನೆ ತಾವರೆಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕುಂಬಳಗೋಡು ನಿವಾಸಿ ರಾಜೇಶ್ (36) ಮೃತಪಟ್ಟ ವ್ಯಕ್ತಿ.
‘ಈತ ಸೋಮವಾರ ಸಂಜೆ ಹುಣ್ಣಿಗೆರೆ ಗ್ರಾಮಕ್ಕೆ ತೆರಳಿದ್ದ ಈತ ಮಹಿಳೆಯೊಬ್ಬರ ಸರ ಕದಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಈತನನ್ನು ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ತಾವರೆಕೆರೆ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕೆಂಗೇರಿ ಬಳಿಯ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸರಗಳ್ಳತನದ ಸಂಬಂಧ ಮಹಿಳೆ ಹಾಗೂ ಗ್ರಾಮಸ್ಥರ ವಿರುದ್ಧ ಮೃತ ವ್ಯಕ್ತಿಯ ಸಂಬಂಧಿಕರು ಮತ್ತೊಂದು ದೂರು ದಾಖಲಿಸಿದ್ದಾರೆ. ತಾವರೆಕೆರೆ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್, ‘ತನಿಖೆ ನಡೆಯುತ್ತಿದೆ. ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ‘ ಎಂದು ಹೇಳಿದರು.
ಪೊಲೀಸರ ವಿರುದ್ಧ ಆರೋಪ: ’ಹಲ್ಲೆಗೊಳಗಾದ ನಂತರ ಪತಿಯನ್ನು ಠಾಣೆಗೆ ಕರೆತರಲಾಗಿತ್ತು. 3 ಗಂಟೆ ಕಾದರೂಪತಿಯನ್ನು ಭೇಟಿಯಾಗಲು ಠಾಣೆಯೊಳಗೆ ಬಿಡಲಿಲ್ಲ. ಸಾವಿನಲ್ಲಿ ಪೊಲೀಸರ ಕೈವಾಡವೂ ಇದೆ‘ ಎಂದು ಮೃತ ರಾಜೇಶ್ ಪತ್ನಿ ಆರೋಪಿಸಿದ್ದಾರೆ.
’ರಾಜೇಶ್ ಅವರನ್ನು ಪೊಲೀಸ್ ಠಾಣೆಗೆ ಕರೆತಂದಿರಲಿಲ್ಲ. ಆಸ್ಪತ್ರೆಗೆ ದಾಖಲಿಸಲಾಗಿತ್ತು‘ ಎಂದುಸಬ್ ಇನ್ಸ್ಪೆಕ್ಟರ್ ನರೇಂದ್ರ ಸ್ಪಷ್ಟಪಡಿಸಿದ್ದಾರೆ.