ಬೆಂಗಳೂರು: ಸಾರ್ವಜನಿಕ ಸ್ಥಳ ಹಾಗೂ ಮನೆಯ ಎದುರು ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನಾಗರಬಾವಿಯ ಗಣೇಶ್ (21) ಬಂಧಿತ. ಈತನಿಂದ ₹3 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ಹಾಗೂ ಒಂದು ಆಟೋ ಜಪ್ತಿ ಮಾಡಲಾಗಿದೆ’ ಎಂದುಪೊಲೀಸರು ಹೇಳಿದ್ದಾರೆ.
‘ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಫೆಬ್ರುವರಿ 9ರ ರಾತ್ರಿ ಮನೆಯ ಎದುರು ಹೊಂಡಾ ಶೈನ್ ಬೈಕ್ ನಿಲುಗಡೆ ಮಾಡಿದ್ದರು. ಬೆಳಿಗ್ಗೆ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಅವರು ನೀಡಿದ ದೂರಿನ ಆಧಾರದಲ್ಲಿ ಮಾರ್ಚ್ 31ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿ ಮೇರೆಗೆ ಕಳವಾಗಿದ್ದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಆರೋಪಿಯ ಬಂಧನದಿಂದ ಚಂದ್ರಾಲೇಔಟ್, ಕೆಂಗೇರಿ, ಬ್ಯಾಟರಾಯನಪುರ ಹಾಗೂ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದಿದ್ದಾರೆ.