ಬೆಂಗಳೂರು: ‘ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಕಂಪನಿಗಳಿಂದ ಹಣ ವಾಪಸು ಕೊಡಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಸಂತ್ರಸ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಆನಂದರಾವ್ ವೃತ್ತ ಬಳಿಯ ಗಾಂಧಿ ಪ್ರತಿಮೆ ಎದುರು ಸೇರಿದ್ದ ಸಂತ್ರಸ್ತರು, ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
‘ಆ್ಯಂಬಿಡೆಂಟ್, ಐಎಂಎ, ಕಣ್ವ, ಇಜಾಜ್, ಅಜ್ಮೇರಾ, ಯೆಲ್ಲೊ, ಡ್ರಿಮ್ಸ್ ಹಾಗೂ ಇತರೆ ಕಂಪನಿಗಳಿಂದ ಸಾವಿರಾರು ಮಂದಿಗೆ ವಂಚನೆ ಆಗಿದೆ. ಸಾಕಷ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಬೀದಿಗೆ ಬಂದಿವೆ’ ಎಂದು ಪ್ರತಿಭಟನಾಕಾರರು ಹೇಳಿದರು.
‘ಕೆಲ ಪ್ರಕರಣಗಳಲ್ಲಿ ಆರೋಪಿಗಳ ಬಂಧನವೂ ವಿಳಂಬವಾಗುತ್ತಿದೆ. ವಂಚನೆಯಲ್ಲಿ ಪಾಲುದಾರರಾದ ಆರೋಪಿಗಳ ಸಂಬಂಧಿಕರು ಹಾಗೂ ಸ್ನೇಹಿತರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಕೆಲ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ’ ಎಂದೂ ದೂರಿದರು.
‘ಸಂತ್ರಸ್ತರಿಗೆ ತ್ವರಿತವಾಗಿ ಹಣ ಸಿಗುವಂತೆ ಮಾಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರ’ ಎಂದೂ ತಿಳಿಸಿದರು.