ಬೆಂಗಳೂರು: ನಗರದ ಪ್ರತಿ ವಿಭಾಗದಲ್ಲೂ ಒಂದು ಪರಿಸರ ಸ್ನೇಹಿ ‘ಸ್ಮಾರ್ಟ್ ಇಂಟಿಗ್ರೇಟೆಡ್ ಟೌನ್ಶಿಪ್’ ಯೋಜನೆ ಕಾರ್ಯಗತಗೊಳಿಸಲು ನಗರ ಯೋಜನೆಯಲ್ಲಿ ಪರಿಣತಿಯುಳ್ಳ ವಿಶ್ವ ವಿದ್ಯಾಲಯಗಳ ಸಹಯೋಗ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸೂಚನೆ ನೀಡಿದ್ದಾರೆ.
ಇಂಟಿಗ್ರೇಟೆಡ್ ಟೌನ್ಶಿಪ್ ಯೋಜನೆ ಪ್ರಗತಿ ಪರಿಶೀಲಿಸಿದ ಅವರು, ’ಸಿಂಗಪುರ ವಿ.ವಿ. ಮತ್ತಿತರ ಕೆಲ ವಿ.ವಿಗುಳಿಗೆ ಯೋಜನೆ ಪರಿಣತಿ ಇದ್ದು, ನೆರವು ಪಡೆಯಿರಿ‘ ಎಂದು ತಿಳಿಸಿದರು.
ಈ ಟೌನ್ಶಿಪ್ಗಳು ಪರಿಸರ ಸ್ನೇಹಿ ಮತ್ತು ಸ್ಮಾರ್ಟ್ ನಗರಗಳಾಗಿರಬೇಕು. ವಸತಿ, ಅಗತ್ಯ ಮೂಲಸೌಕರ್ಯಗಳು, ಶೈಕ್ಷಣಿಕ ಸೌಲಭ್ಯ, ಆರೋಗ್ಯ ಸೇವೆಗಳು, ವಾಣಿಜ್ಯ ಚಟುವಟಿಕೆಗಳು ಮತ್ತು ಸಮೀಪದಲ್ಲಿಯೇ ಕೈಗಾರಿಕೆಗಳೂ ಸ್ಥಾಪಿಸುವಂತಿರಬೇಕು. ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿರಬೇಕು ಎಂದರು.
ಟೌನ್ಶಿಪ್ ನಿರ್ಮಾಣಕ್ಕೆ ಭೂಮಿಯ ಲಭ್ಯತೆ ಆಧಾರದಲ್ಲಿ ವಿವಿಧ ಜಿಲ್ಲೆಗಳಿಂದ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ತಿಳಿಸಿದರು.