ಬೆಂಗಳೂರು: ವಾರಕ್ಕೆ ಎರಡು ದಿನ ಸಂಚರಿಸಲಿರುವ ಶಿವಮೊಗ್ಗ– ಚೆನ್ನೈ ನಡುವಿನ ತತ್ಕಾಲ್ ಎಕ್ಸ್ಪ್ರೆಸ್ ರೈಲಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು.
ಶಿವಮೊಗ್ಗದಿಂದ ಹೊರಟ ರೈಲಿಗೆ ನಗರದ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದರು. ಈ ರೈಲು ವಾರದಲ್ಲಿ ಒಂದು ದಿನ ಸಂಚರಿಸುತ್ತಿತ್ತು.
ಬಳಿಕ ಮಾತನಾಡಿದ ಅವರು, ‘ಕಳೆದ ಒಂದು ದಶಕದಲ್ಲಿ ಶಿವಮೊಗ್ಗ ಜಿಲ್ಲೆಯು ರೈಲ್ವೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ. ಎರಡು ಹೊಸ ರೈಲು ಮಾರ್ಗ ಹಾಗೂ ಒಂದು ರೈಲ್ವೆ ಕೋಚಿಂಗ್ ಡಿಪೊ ಮಂಜೂರಾಗಿದೆ’ ಎಂದು ಹೇಳಿದರು.
‘ರಾಜ್ಯದ ಇತರೆ ರೈಲು ಮಾರ್ಗದ ಯೋಜನೆಯ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಭೂಮಿ ಹಾಗೂ ಅನುದಾನ ನೀಡಲು ಸಿದ್ಧವಿದೆ’ ಎಂದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇದ್ದರು.