ಬೆಂಗಳೂರು: ‘ಕೊರೊನಾ ವೈರಾಣು ಭೀತಿ ಹಿನ್ನೆಲೆಯಲ್ಲಿ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟ್ಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು’ ಎಂದು ವಕೀಲರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಈ ಕುರಿತಂತೆ ‘ಪಿಎಸ್ಎ ಲಾ ಪಾರ್ಟ್ನರ್ಸ್’ ವಕೀಲ ಪ್ರವೀಣ ಕುಮಾರ್ ಹಿರೇಮಠ ಅವರು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರಿಗೆ ವಿವರವಾದ ಲಿಖಿತ ಮನವಿ ಸಲ್ಲಿಸಿದ್ದಾರೆ.
‘ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ನಿಗದಿಪಡಿಸಬೇಕು. ಪ್ರಕರಣಗಳಲ್ಲಿ ಸಾಕ್ಷಿ ನುಡಿಯಲು ಕಡ್ಡಾಯವಾಗಿ ಸಾಕ್ಷಿದಾರರು ಖುದ್ದು ಹಾಜರಾಗಬೇಕಾಗುತ್ತದೆ. ಅದೇ ರೀತಿ ಕಕ್ಷಿದಾರರೂ ಕೋರ್ಟ್ಗೆ ಹಾಜರಾಗಬೇಕಾಗುತ್ತದೆ. ಆದ್ದರಿಂದ ಸಾಕ್ಷಿದಾರರು ಮತ್ತು ಕಕ್ಷಿದಾರರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು’ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
‘ಕೊರೊನಾ ಕುರಿತು ನ್ಯಾಯಾಲಯಗಳಲ್ಲಿ ಜಾಗೃತಿ ಸಭೆ ಆಯೋಜಿಸಬೇಕು. ನ್ಯಾಯಾಲಯಗಳ ಶೌಚಾಲಯಗಳಲ್ಲಿ ಹ್ಯಾಂಡ್ ವಾಷ್, ಸ್ಯಾನಿಟೈಝರ್, ಸಾಬೂನು ಇತ್ಯಾದಿ ವಸ್ತುಗಳನ್ನು ಪೂರೈಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಪತ್ರದಲ್ಲಿ ವಿವರಿಸಲಾಗಿದೆ.