ಬೆಂಗಳೂರು: ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮೇಲೆ ಇತ್ತೀಚೆಗೆ ನಡೆದಿದ್ದ ಹಲ್ಲೆ ಯತ್ನ ಪ್ರಕರಣದಲ್ಲಿಐದು ಮಂದಿ ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ವಿವಿಧ ಠಾಣೆಗಳಲ್ಲಿ ರೌಡಿಶೀಟರ್ಗಳಾಗಿರುವ ದಿಲೀಪ್, ಅಭಿ, ಕಾರ್ತಿಕ್, ಪವನ್, ಭರತ್ ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 29ರ ರಾತ್ರಿ ಜಾಲಹಳ್ಳಿಯಲ್ಲಿರುವಶಶಿಕುಮಾರ್ ಅವರ ನಿವಾಸದ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಶಶಿಕುಮಾರ್ ಅವರತೊಡೆ ಹಾಗೂ ಬಲಗೈಗೆ ಗಾಯವಾಗಿತ್ತು. ಆತ್ಮರಕ್ಷಣೆಗಾಗಿ ಶಶಿಕುಮಾರ್ ಪಿಸ್ತೂಲ್ ತೋರಿಸುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದರು. ಬಳಿಕ ಜಾಲಹಳ್ಳಿ ಠಾಣೆಗೆ ಶಶಿಕುಮಾರ್ ದೂರು ನೀಡಿದ್ದರು.
‘ಪತ್ತೆ ಕಾರ್ಯದ ವೇಳೆ ಆರೋಪಿಗಳ ಸುಳಿವು ಸಿಕ್ಕಿತ್ತು. ಆರು ತಿಂಗಳ ಹಿಂದೆ ಶಶಿಕುಮಾರ್ ಕೊಲೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಇದಕ್ಕಾಗಿ ಶಶಿಕುಮಾರ್ ಮನೆ ಸಮೀಪದ ಮನೆಯೊಂದರಲ್ಲಿ ಆರೋಪಿಗಳು ಬಾಡಿಗೆಗೆ ಇದ್ದರು’ ಎಂದು ಪೊಲೀಸರು ವಿವರಿಸಿದರು.
‘ಮನೆ ಮೇಳೆ ದಾಳಿ ನಡೆಸಿ, ಕೃತ್ಯಕ್ಕೆ ಬಳಸಿದ್ದ ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮಚ್ಚು ಮತ್ತು ಲಾಂಗುಗಳು, ಎರಡು ದ್ವಿಚಕ್ರ ವಾಹನ ಹಾಗೂ ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.