ಬೆಂಗಳೂರು: ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬೆಂಗಳೂರಿನ ಎರಡು ಸ್ಥಳಗಳಲ್ಲಿ ಭಾನುವಾರ ಶೋಧ ನಡೆಸಿದರು.
ಬಾಂಗ್ಲಾದೇಶದ ಮಾನವ ಕಳ್ಳಸಾಗಣೆದಾರರು ಹಾಗೂ ಸಾಗಣೆಗೊಂಡ ಸಂತ್ರಸ್ತರಿಗೆ ನಕಲಿ ಗುರುತಿನ ಚೀಟಿ ಸೃಷ್ಟಿಸುತ್ತಿರುವ ಶಂಕಿತ ಆರೋಪಿಯ ಬಗ್ಗೆ ಸಿಕ್ಕಿದ್ದ ಮಾಹಿತಿ ಮೇರೆಗೆ ಶೋಧ ನಡೆಸಿರುವುದಾಗಿ ಎನ್ಐಎ ಮೂಲಗಳು ತಿಳಿಸಿವೆ.
ಶೋಧದ ವೇಳೆ ದೋಷಪೂರಿತ ಹಾಗೂ ನಕಲಿ ದಾಖಲೆಗಳನ್ನು ತಯಾರಿಸಲು ಬಳಸಲಾದ ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ ಸೇರಿದಂತೆ ಆರು ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಿರುವುದಾಗಿ ಪ್ರಕಟಣೆ ತಿಳಿಸಿದೆ.
ಜೂನ್ನಲ್ಲಿ ರಾಮಮೂರ್ತಿನಗರ ವ್ಯಾಪ್ತಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ 13 ಆರೋಪಿಗಳು ಸಿಕ್ಕಿಬಿದ್ದಿದ್ದರು. ಈ ವೇಳೆ ಬಾಂಗ್ಲಾದೇಶದ ಏಳು ಮಹಿಳೆಯರು ಹಾಗೂ ಒಂದು ಮಗುವನ್ನುಮಾನವ ಕಳ್ಳಸಾಗಣೆದಾರರ ವಶದಿಂದ ರಕ್ಷಿಸಲಾಗಿತ್ತು.
ಉದ್ಯೋಗ ಕೊಡಿಸುವ ನೆಪದಲ್ಲಿಮಹಿಳೆಯರನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದು, ಬಳಿಕ ಅವರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಎನ್ಐಎ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.