ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು ಮಾಕೇನಹಳ್ಳಿ ಗ್ರಾಮದ ರೈತರಾದ ಪ್ರಕಾಶ್ ಮತ್ತು ನಂಜುಂಡಯ್ಯ ಎಂಬುವವರಿಗೆ ಸೇರಿದ ರಾಗಿ ಬಣವೆಗೆ ಶನಿವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ರಾಗಿ ಹಾಗೂ ಹುಲ್ಲು ಬೆಂಕಿಗೆಆಹುತಿಯಾಗಿದೆ.
ರಾಗಿ ಇನ್ನೂ ಒಕ್ಕಣೆ ಮಾಡಿರಲಿಲ್ಲ. ಸುಮಾರು ಐವತ್ತು ಮೂಟೆ ರಾಗಿ, ಮೂರ್ನಾಲ್ಕು ಟ್ರಾಕ್ಟರ್ ಹುಲ್ಲು ಆಗುತ್ತಿತ್ತು. ಎಲ್ಲ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಆಗಿದೆ ಎಂದು ಅಳಲು ತೋಡಿಕೊಂಡರು ಪ್ರಕಾಶ್.
ಮನೆಯ ಪಕ್ಕದಲ್ಲಿಯೇ ಬಣವೆ ಇದೆ. ಮಧ್ಯ ರಾತ್ರಿ ಒಂದು ಗಂಟೆಯ ಸುಮಾರಿಗೆ ಬೆಂಕಿಯಿಟ್ಟಿದ್ದು, ಬೆಂಕಿಯ ಜ್ವಾಲೆ ಹೆಚ್ಚಾದಾಗ ಎಚ್ಚರಿಕೆ ಆಗಿ ಬಂದು ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದೆವು. ಅವರು ಬಂದು ಆರಿಸುವ ವೇಳೆಗೆ ಎಲ್ಲಾ ಸುಟ್ಟು ಹೋಗಿದೆ ಎಂದರು.
ದನಗಳಿಗೆ ಮೇವು ಇಲ್ಲ, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆವರು ಸುರಿಸಿ ದುಡಿಮೆ ಮಾಡಿದ್ದೆಲ್ಲ ಹಾಳಾಗಿದೆ ಎಂದು ಮತ್ತೊಬ್ಬ ರೈತ ನಂಜುಂಡಯ್ಯ ಹೇಳಿದರು.