ದಾಬಸ್ ಪೇಟೆ: ಕಾರು ಮತ್ತು ಬೈಕ್ ನಲ್ಲಿ ಬಂದು ₹5 ಲಕ್ಷ ದರೋಡೆ ಮಾಡಿ ಹೋಗಿದ್ದ ನಾಲ್ವರು ಆರೋಪಿಗಳನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ರೌಡಿ ಶೀಟರ್ ಸೋಮಶೇಖರ್ (37), ನಾಗಾರ್ಜನ (31), ಸುನಿಲ್ (29) ಹಾಗೂ ಗಜ (33) ಎಂಬ ಆರೋಪಿಗಳನ್ನು ಬಂಧಿಸಿದ್ದು ತಲೆಮರೆಸಿಕೊಂಡಿರುವ ಮಧು (32) ಮತ್ತು ಸತೀಶ್ಗಾಗಿ (33)ಗಾಗಿ ಶೋಧಕಾರ್ಯ ಮುಂದುವರಿದಿದೆ.
ತಮಿಳುನಾಡಿನ ಮಣಿಕಂಠನ್ ತುಮಕೂರಿನಲ್ಲಿ ಅಡಕೆ ವ್ಯಾಪಾರ ಮಾಡಿಕೊಂಡು ವಾಪಸ್ ಬರುವಾಗ ಜ.29 ರಂದು ದಾಬಸ್ಪೇಟೆ ಠಾಣೆ ವ್ಯಾಪ್ತಿಯ ಹಳೇನಿಜಗಲ್ ಬಳಿ ಕಾರು ಮತ್ತು ಬೈಕ್ನಲ್ಲಿ ಬಂದ ಆರೋಪಿಗಳು ಅವರ ಕಾರನ್ನು ಅಡ್ಡಗಟ್ಟಿ ₹5 ಲಕ್ಷ ನಗದು, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಮಣಿಕಂಠನ್ ದೂರು ನೀಡಿದ್ದರು. ಬಂಧಿತರಿಂದ ಕಾರು, ಬೈಕ್ ಚಿನ್ನದ ಸರ ಹಾಗೂ ₹4 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.