ಬೆಂಗಳೂರು: ‘ಆಡಳಿತದಲ್ಲಿ ಪ್ರತಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಭಾಗಿಯಾಗಲು ಅವಕಾಶ ನೀಡುವುದು ಸಂವಿಧಾನದ ಆಶಯ. ಆದರೆ, ಆಡಳಿತ ವರ್ಗ ಆಯೋಗ ರಚಿಸುವ ಮೂಲಕ ದಮನಿತರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ’ ಎಂದು ಹೈಕೋರ್ಟ್ನ ಹಿರಿಯ ವಕೀಲ ಎಚ್.ಮೋಹನ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ‘ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ‘ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಆಯೋಗ ಮತ್ತು ಎಸ್ಸಿ, ಎಸ್ಟಿ ಮೀಸಲಾತಿ ಪ್ರಾತಿನಿಧ್ಯ’ ಕುರಿತು ವಿಷಯ ಮಂಡಿಸಿದರು.
‘ಸಮುದಾಯಗಳ ಸಮಸ್ಯೆಗಳನ್ನು ಮುಂದೂಡಲು ಆಡಳಿತ ವರ್ಗ ಆಯೋಗಗಳನ್ನು ಸೃಷ್ಟಿಸಿ, ಸಮುದಾಯಗಳ ಹೋರಾಟದ ದಿಕ್ಕು ತಪ್ಪಿಸುತ್ತಿದೆ. ಅಂಬೇಡ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಲು ಆಚರಣೆಗಳು ನಡೆ ಯುತ್ತಿವೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಗೌರವಿಸುವ ಹಾಗೂ ಜಾಗೃತಗೊಳಿಸುವ ಅಧ್ಯಯನ ಮತ್ತು ಸಂಶೋಧನೆಗಳು ನಡೆಯಬೇಕಿದೆ’ ಎಂದರು.
‘ದಲಿತರ ಸಾಮಾಜಿಕ ಸ್ಥಿತಿಗತಿ ಮತ್ತು ಮುಂದಿರುವ ಸವಾಲುಗಳು’ ಕುರಿತು ಮಾತನಾಡಿದಸಾಹಿತಿ ಡಾ.ಸಿದ್ಧಲಿಂಗಯ್ಯ,‘ 64 ಲಕ್ಷ ದಲಿತ ಯುವಜನರಲ್ಲಿ 40 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಮಲಮೂತ್ರ ತುಂಬಿದ ಗುಂಡಿಗಳನ್ನು (ಮ್ಯಾನ್ಹೋಲ್) ಸ್ವಚ್ಛ ಮಾಡಲು ಹೋಗಿ ಇಲ್ಲಿವರೆಗೆ 620 ದಲಿತರು ಮರಣ ಹೊಂದಿದ್ದಾರೆ. ರಾಜ್ಯದಲ್ಲಿ 75 ದಲಿತರು ಮ್ಯಾನ್ಹೋಲ್ಗಳಲ್ಲಿ ಸತ್ತಿದ್ದಾರೆ. 2013ರಲ್ಲೇ ಇದನ್ನು ನಿಷೇಧಿಸಿದರೂ ಈ ಸಮಸ್ಯೆ ಇನ್ನೂ ಜೀವಂತವಾಗಿದೆ’ ಎಂದರು.
‘ನಮ್ಮ ಹೋರಾಟ ಒಂದು ಜಾತಿ, ಪಕ್ಷ, ಧರ್ಮದ ಮೇಲೆ ಆಗಿರದೆ ಅಧರ್ಮ, ಅನ್ಯಾಯದ ಕಡೆಗೆ ಸಾಗಬೇಕು. ಇದಕ್ಕೆ ಮೇಲ್ವರ್ಗದವರೂ ಕೈಜೋಡಿಸಬೇಕು’ ಎಂದು ಹೇಳಿದರು.