ಬೆಂಗಳೂರು: ದೀಪಾವಳಿಯ ಎರಡನೇ ದಿನವಾದ ಭಾನುವಾರ ನಗರದಲ್ಲಿ ಎಂಟು ಮಕ್ಕಳು ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಕ್ಕಳಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಎರಡು ದಿನದಲ್ಲಿ ಒಟ್ಟು 10 ಮಕ್ಕಳು ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡಿವೆ. ಶನಿವಾರ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಇಬ್ಬರು ಮಕ್ಕಳ ಕಣ್ಣಿಗೆ ಚಿಕ್ಕ ಪ್ರಮಾಣದ ಹಾನಿ ಮಾಡಿಕೊಂಡು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದರು.
ವರ್ತೂರಿನ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಎರಡು, ನಾರಾಯಣ ನೇತ್ರಾಲಯದಲ್ಲಿ ಎರಡು ಹಾಗೂ ಮಿಂಟೋ ಆಸ್ಪತ್ರೆಯಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.
ಕೋವಿಡ್ ಪರೀಕ್ಷೆ:
ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಗಡಿ ರಸ್ತೆಯ ನಾಲ್ಕು ವರ್ಷದ ಬಾಲಕ ಮತ್ತು ಹೆಗ್ಡೆ ನಗರದ 12 ವರ್ಷದ ಬಾಲಕನ ಕಣ್ಣಿಗೆ ತೀವ್ರ ಗಾಯವಾಗಿದೆ. ಬೇರೆಯವರು ಸಿಡಿಸಿದ ಪಟಾಕಿ ತಗುಲಿ ಈ ಬಾಲಕರು ಗಾಯಗೊಂಡಿದ್ದಾರೆ. ಬಾಲಕರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿರುವುದರಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ.
‘ಶಸ್ತ್ರಚಿಕಿತ್ಸೆಗೊಳಪಡಿಸುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ರಾಜ್ಯಸರ್ಕಾರ ಆದೇಶಿಸಿದೆ. ಅದರಂತೆ, ಈ ಇಬ್ಬರು ಬಾಲಕರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಆರ್ಟಿ ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.