ನೆಲಮಂಗಲ: ‘ವೃಷಭಾವತಿ ವ್ಯಾಲಿ ನೀರಿನಿಂದ ಕೆರೆ ತುಂಬಿಸಿ ಜನರ ಆರೋಗ್ಯ ಹಾಳು ಮಾಡಬೇಡಿ. ಈಗಾಗಲೇ ಪೈಪ್ಲೈನ್ ಅಳವಡಿಸಿರುವ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಿ, ತಾಲ್ಲೂಕಿನ ಜನರಿಗೆ ನೀರು ಕೊಡಿ’ ಎಂದು ಬಿಜೆಪಿಯ ನೂತನ ತಾಲ್ಲೂಕು ಅಧ್ಯಕ್ಷ ಜಗದೀಶ ಚೌಧರಿ ಶಾಸಕರನ್ನು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಅವರಿಂದ ನೇಮಕಾತಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ‘ಸಂಸ್ಕರಿಸಿದ ಕೊಳೆಚೆ ನೀರಿನಿಂದ ಕೆರೆಗಳನ್ನು ತುಂಬಿಸುತ್ತೇವೆ ಎಂದು ಹೇಳುತ್ತೀರಿ. ಈ ನೀರು ಕೃಷಿಗೆ ಯೋಗ್ಯವಲ್ಲ ಎಂದು ಸಂಸ್ಥೆಯೊಂದು ಬಹಳ ಹಿಂದೆಯೇ ವರದಿ ನೀಡಿದೆ. ಕೆ.ಸಿ. ವ್ಯಾಲಿ ಯೋಜನೆ ಜಾರಿಯಾಗಿರುವ ಕಡೆ ಜನರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಂಥ ನೀರು ನಮ್ಮ ತಾಲ್ಲೂಕಿನ ಕೆರೆಗಳಿಗೆ ಹರಿಸಬೇಡಿ’ ಎಂದು ಒತ್ತಾಯಿಸಿದರು.
‘ತಾಲ್ಲೂಕಿಗೆ ₹869 ಕೋಟಿ ಅನುದಾನ ಕೊಟ್ಟಿರುವುದಾಗಿ ಮುಖ್ಯಮಂತ್ರಿಗಳಿಂದ ಸುಳ್ಳು ಹೇಳಿಸುವ ಶಾಸಕರು, ಕಾರ್ಯಗತವಾಗಿರುವ ಕೆಲಸಗಳನ್ನು ಮಾತ್ರ ತಿಳಿಸಿ’ ಎಂದು ಆಗ್ರಹಿಸಿದರು.
ಮುಖಂಡ ಸಪ್ತಗಿರಿ ಶಂಕರ್ನಾಯಕ್, ಮಾಜಿ ಶಾಸಕ ಎಂ.ವಿ.ನಾಗರಾಜು, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಮುಖಂಡರಾದ ಬಿ.ಹೊಂಬಯ್ಯ, ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ರವಿ, ಸತೀಶ್, ಪಟ್ಟಣ ಬಿಜೆಪಿ ಅಧ್ಯಕ್ಷ ರವಿ ಕಾರ್ಯಕ್ರಮದಲ್ಲಿ ಹಾಜರಿದ್ದರು.