ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸನಪುರದ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ನಗದು ಕಳ್ಳತನವಾಗಿದ್ದು, ಈ ಸಂಬಂಧ ಪ್ರಾಂಶುಪಾಲರಾದ ಸೋಫಿಯಾ ಬಿರ್ಲಾ ದೂರು ನೀಡಿದ್ದಾರೆ.
ಪ್ರಾಂಶುಪಾಲರ ಕೊಠಡಿ ಹಾಗೂ ಆಡಳಿತ ಕಚೇರಿ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು, ನಗದು ಕದ್ದೊಯ್ದಿದ್ದಾರೆ. ಅದರ ಮೊತ್ತ ಎಷ್ಟು ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದರು.
ಶಾಲೆಯ ಸುತ್ತಮುತ್ತ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅದರ ದೃಶ್ಯಗಳು ಸಂಗ್ರಹವಾಗುವ ಡಿವಿಆರ್ ಪ್ರಾಂಶುಪಾಲರ ಕೊಠಡಿಯಲ್ಲಿತ್ತು. ತಮ್ಮ ಮುಖಚಹರೆ ಸೆರೆಯಾಗಿರಬಹುದು ಎಂದು ತಿಳಿದ ದುಷ್ಕರ್ಮಿಗಳು, ಅದನ್ನೇ ಹೊತ್ತೊಯ್ದಿದ್ದಾರೆ ಎಂದರು.
‘ಮಾ. 28ರಂದು ಮಧ್ಯಾಹ್ನ 3.30ಕ್ಕೆ ಶಾಲೆಗೆ ಬೀಗ ಹಾಕಿ ಮನೆಗೆ ಹೋಗಿದ್ದೆ. ಎರಡು ದಿನ ಶಾಲೆಗೆ ರಜೆ ಇತ್ತು. ಮಾ. 30ರಂದು ಬೆಳಿಗ್ಗೆ 8.30ಕ್ಕೆ ಶಾಲೆಗೆ ಬಂದು ನೋಡಿದಾಗಲೇ ಕಳ್ಳತನ ಆಗಿರುವುದು ಗೊತ್ತಾಯಿತು’ ಎಂದು ಪ್ರಾಂಶುಪಾಲರು ದೂರಿನಲ್ಲಿ ತಿಳಿಸಿದ್ದಾರೆ.
‘ಶಾಲೆಯ ಬಗ್ಗೆ ಗೊತ್ತಿರುವ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.