ಬೆಂಗಳೂರು: ವರ್ತೂರು ಹೋಬಳಿಯ ಗುಂಜೂರು ಬಳಿ ಕ್ರೀಡಾಂಗಣ ನಿರ್ಮಾಣಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಅರಣ್ಯ ಇಲಾಖೆ ಆಕ್ಷೇಪಣೆ ಸಲ್ಲಿಸಿದ್ದರೂ ಕಾಮಗಾರಿ ಮುಂದುವರಿಸಲಾಗಿದೆ ಎಂದು ಆರೋಪಿಸಿ ಟಿ.ನರಸಿಂಹಮೂರ್ತಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
‘ಗುಂಜೂರು ಗ್ರಾಮದ ಸರ್ವೆ ನಂಬರ್ 104ರಲ್ಲಿ 27 ಎಕರೆ 8 ಗುಂಟೆ ಜಾಗ ಇದೆ. ಅದು ಅರಣ್ಯ ಭೂಮಿ ಎಂಬ ವರದಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರು ನಗರ ಜಿಲ್ಲಾಧಿಕಾರಿಗೆ 2020ರ ಜನವರಿಯಲ್ಲೇ ಸಲ್ಲಿಸಿದ್ದಾರೆ. ರಾಜಕಾರಣಿಗಳ ಪ್ರಭಾವದಿಂದಾಗಿ ಅರಣ್ಯ ಭೂಮಿ ರಕ್ಷಿಸುವುದು ಕಷ್ಟವಾಗಿದೆ. ಪಹಣಿಯಲ್ಲಿ ಅರಣ್ಯ ಭೂಮಿ ಇದ್ದುದ್ದನ್ನು ಕಂದಾಯ ಅಧಿಕಾರಿಗಳು ತಿರುಚಿದ್ದಾರೆ ಎಂದೂ ವರದಿಯಲ್ಲಿ ತಿಳಿಸಿದ್ದಾರೆ’ ಎಂದು ಅರ್ಜಿದಾರರು ವಿವರಿಸಿದ್ದಾರೆ.
ಡಿಸಿಎಫ್ ವರದಿ ಪರಿಗಣಿಸಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳದ ಕಾರಣ ಮಧ್ಯಂತರ ತಡೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಡಿಸಿಎಫ್ ವರದಿ ಆಧರಿಸಿ ಕೈಗೊಂಡ ಕ್ರಮಗಳ ಬಗ್ಗೆ ವಿವರ ಸಲ್ಲಿಸುವಂತೆ ಸರ್ಕಾರಕ್ಕೆ ನೋಟಿಸ್ ನೀಡಿದ ಪೀಠ, ಅಲ್ಲಿಯ ತನಕ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ನಿರ್ದೇಶನ ನೀಡಿತು.