ಬೆಂಗಳೂರು: ಭಾರಿ ಹಣ ವಂಚನೆ ಹಗರಣದ ಆರೋಪಿ ಇಂಜಾಜ್ ಇಂಟರ್ನ್ಯಾಷನಲ್ನ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾಉದ್ದೀನ್ ಎಂಬಾತನನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನ.11ರ ತನಕ ವಶಕ್ಕೆ ಪಡೆದಿದ್ದಾರೆ.
ಹೂಡಿಕೆದಾರರಿಗೆ ಭಾರಿ ಮೊತ್ತದ ಹಣ ಹಿಂದಿರುಗಿಸುವ ಆಮಿಷವೊಡ್ಡಿ ವಂಚಿಸುತ್ತಿದ್ದ ಆರೋಪದಲ್ಲಿಇಂಜಾಜ್ ಇಂಟರ್ನ್ಯಾಷನಲ್ ಮತ್ತು ಅಸೋಸಿಯೇಟ್ಸ್ ಗ್ರೂಪ್ ವಿರುದ್ಧ 2017ರಲ್ಲಿ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಯಲಹಂಕ ತಹಶೀಲ್ದಾರ್ ಕಚೇರಿಯ ಕಂದಾಯ ಅಧಿಕಾರಿ ಅನಂತ ಪದ್ಮನಾಭ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು. ಸಾವಿರಾರು ಮಂದಿಗೆ ₹250 ಕೋಟಿಯಷ್ಟು ವಂಚಿಸುತ್ತಿದ್ದ ಆರೋಪದಲ್ಲಿ ಮಿಸ್ಬಾ ಉದ್ದೀನ್ ಬಂಧಿತರಾಗಿದ್ದರು.